ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಮತ್ತು ರೋಟರಿ ಬೆಂಗಳೂರು ಸಹಯೋಗದಲ್ಲಿ, ರೋಟರಿ ಉದ್ಯೋಗ್ ರೆಡ್ ಕ್ರಾಸ್ ರಕ್ತ ಕೇಂದ್ರವನ್ನು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಎಲ್ಇ (ರವಿ ಕಿರ್ಲೋಸ್ಕರ್) ಆಸ್ಪತ್ರೆಯಲ್ಲಿ ಬುಧವಾರ ಉದ್ಘಾಟಿಸಲಾಯಿತು.ಕೇಂದ್ರವನ್ನು ರಾಜ್ಯಪಾಲ ಥಾವರಚಂದ್ ಗೆಹಲೋಥ್ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ರಕ್ತದ ಅವಶ್ಯಕತೆ ಮತ್ತು ಸುರಕ್ಷಿತ ರಕ್ತಸಂಗ್ರಹಣೆಯ ಮಹತ್ವವನ್ನು ವಿವರಿಸಿ, ರೋಟರಿ ಮತ್ತು ರೆಡ್ಕ್ರಾಸ್ ಸಂಸ್ಥೆಗಳ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು.ರೋಟರಿಯನ್ ಎಲಿಜಬೆತ್ ಚೆರಿಯನ್, ರೋಟರಿ ಉದ್ಯೋಗ್ ಯೋಜನೆ ಕುರಿತು ವಿವರಿಸಿದರು. ಈ ಸಂದರ್ಭ ರಕ್ತದಾನಿಗಳಾದ ಪಿ. ಜಯಶಂಕರ್ ಹಾಗೂ ಎಸ್. ರವಿರಾಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.