ಕನ್ನಡಪ್ರಭ ವಾರ್ತೆ ಚಾಮರಾಜನಗರ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ ಚಾಮರಾಜನಗರ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ ಹಾಗೂ ರಾಜ್ಯಕಾರ್ಯಕಾರಣಿ ಸಭೆಯನ್ನು ಮಾ.2ರಂದು ಬೆಳಗ್ಗೆ 10ಕ್ಕೆ ನಗರದ ನಿಜಗುಣ ರೆಸಾರ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರುಪ್ಸ ರಾಜ್ಯ ಸಂಘಟನಾ ಕಾರ್ಯದರ್ಶಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಎನ್. ನಂಜುಂಡಸ್ವಾಮಿ ಹೇಳಿದರು.ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸುವರು. ರುಪ್ಸ ರಾಜ್ಯಾಧ್ಯಕ್ಷ ಡಾ. ಹಾಲನೂರು. ಎಸ್. ಲೇಪಾಕ್ಸ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್, ಎ.ಆರ್. ಕೃಷ್ಣಮೂರ್ತಿ, ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಮೈಸೂರು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ, ಜಿಲ್ಲಾ ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಸೇರಿದಂತೆ ರಾಜ್ಯ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.1990 ರಿಂದ ಇಚೇಗೆ ಸರ್ಕಾರ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳಿಗೆ ಹಲವಾರು ನಿರ್ಬಂಧಗಳನ್ನು ಹೇರಿದ್ದು, ಶಾಲೆಗಳನ್ನು ನಡೆಸುವುದೇ ಕಷ್ಟವಾಗಿದೆ. 15 ವರ್ಷಗಳವರೆಗೆ ಮಾನ್ಯತೆ ಮುಂದುವರೆಸಬೇಕು ಎಂದು ರಾಜ್ಯಸರ್ಕಾರವೇ ಆದೇಶ ನೀಡಿದೆ. ಆದರೆ ಇಲಾಖಾಧಿಕಾರಿಗಳು ಇದಕ್ಕೆ ವಿರುದ್ಧವಾಗಿದ್ದು, ಪ್ರತಿವರ್ಷವೂ ಶಾಲಾ ನವೀಕರಣ ಮಾಡುವಂತೆ ಹೇಳುತ್ತಿದ್ದಾರೆ ಎಂದರು. ಶಾಲೆಗಳನ್ನು ನಡೆಸುವುದಕ್ಕೆ ಪರದಾಡುವ ನಮಗೆ ನವೀಕರಣಕ್ಕೆ ಹಣವೆಚ್ಚ ಮಾಡುವುದೇ ಸಮಸ್ಯೆಯಾಗಿದೆ. ಕಟ್ಟಡಭದ್ರತೆ, ಬೆಂಕಿಸುರಕ್ಷತಾ ಕ್ರಮಗಳ ಅಳವಡಿಕೆ ಮಾಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡುತ್ತಾರೆ. ಬಹುತೇಕ ಸರಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿವೆ. ಆ ಶಾಲೆಗಳಿಗೆ ಯಾವುದೇ ನಿರ್ಬಂಧವಿಲ್ಲ. ನಮಗೆ ಯಾಕೆ ಇಲ್ಲಸಲ್ಲದ ನಿರ್ಬಂಧ ಎಂದು ಪ್ರಶ್ನಿಸಿದರು.ಕಾರ್ಯಕ್ರಮಕ್ಕೆ ಮಾನ್ಯತೆಪಡೆದ ಅನುದಾನರಹಿತ ಖಾಸಗಿಶಾಲೆಗಳ ಶಿಕ್ಷಕರು, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಸ್.ರಮೇಶ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಮುಕುಂದ, ಕಾರ್ಯದರ್ಶಿ ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.