ಒಳ ಮೀಸಲಾತಿಯನ್ನು ಪುನರ್ ಪರಿಶೀಲಿಸಿ ಕೊರಚರಿಗೆ ನ್ಯಾಯ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರು ಸುರೇಶ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಒಳ ಮೀಸಲಾತಿಯನ್ನು ಪುನರ್ ಪರಿಶೀಲಿಸಿ ಕೊರಚರಿಗೆ ನ್ಯಾಯ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರು ಸುರೇಶ್ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರವು ಇತ್ತೀಚೆಗೆ ಪರಿಶಿಷ್ಟ ಜಾತಿಯಾದ ಒಳಮೀಸಲಾತಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಅದರಲ್ಲಿ ಕೊರಚ ಜನಾಂಗದವರನ್ನು ಮೂರನೇ ಪಟ್ಟಿಯಲ್ಲಿ ಸೇರಿಸಿರುವುದು ಘೋರ ಅನ್ಯಾಯವಾಗಿದೆ ಎಂದರು.
ಕೊರಚ ಸಮಾಜವು ತಬಲಿ ಸಮಾಜವಾಗಿದ್ದು, ಕೇವಲ 1 ಲಕ್ಷದೊಳಗಿನ ಜನಸಂಖ್ಯೆ ಹೊಂದಿದೆ. 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಅಲೆಮಾರಿ ಪರಿಶಿಷ್ಟ ಜಾತಿಗಳ ಗುಂಪುಗಳನ್ನು ಒಂದು ಗುಂಪು ಮಾಡಿ, ಶೇ.2 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕೊರಚ ಸಮಾಜವು ಯಾವೊಂದು ಜಾತಿಗೆ ಸಮನಾಂತರ ಜಾತಿಗಳು ಇರುವುದಿಲ್ಲ. ಕಾರಣ ಕೊರಚ ಸಮಾಜದ ಬಗ್ಗೆ ಇಲ್ಲಿಯವರೆಗೂ ಸಹ ಯಾವುದೇ ಕುಲಶಾಸ್ತ್ರ ಅಧ್ಯಯನವಾಗಿಲ್ಲ. ಆದರೂ ಸಹ ಸಮನಾಂತರ ಜಾತಿಗಳೆಂದು ನಮ್ಮನ್ನು ಬೇರೊಂದು ಜಾತಿಯೊಂದಿಗೆ ಕೂಡಿಸುವುದು ನಮ್ಮ ಸಮಾಜಕ್ಕೆ ಮಾಡಿರುವ ದ್ರೋಹವಾಗಿದೆ ಎಂದರು.
ರಾಜ್ಯ ಸಂಘದ ಗೌರವಾಧ್ಯಕ್ಷ ಸಿ. ಜಯಪ್ಪ ಮಾತನಾಡಿ, ಕೊರಚರು, ಅಲೆಮಾರಿಗಳು, ಅಪರಾಧಿಕ ಬುಡಕಟ್ಟು ಜನಾಂಗದವರಾಗಿದ್ದು, ಈಗಲೂ ಸಹ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ರಾಜಕೀಯವಾಗಿ ಯಾವುದೇ ಚುನಾಯಿತ ಪ್ರತಿನಿಧಿಗಳಿಲ್ಲ. ಇದೊಂದು ಅಸಂಘಟಿತ ಸಮಾಜವಾಗಿದ್ದು, ಕಡುಬಡವರಾಗಿ, ನಿರ್ಗತಿಕರಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕವಾಗಿಯೂ ಹಿಂದುಳಿದ ಸಮಾಜವಾಗಿದೆ. ಇದನ್ನು ನಾಗಮೋಹನ್ದಾಸ್ ವರದಿಯಲ್ಲಿಯೂ ಸಹ ಹೇಳಿದ್ದರು. ಸರ್ಕಾರ ನಮ್ಮ ಜನಾಂಗವನ್ನು ಮೂರನೇ ಪಟ್ಟಿಯಲ್ಲಿ ಸೇರಿಸಿ, ಸಮಾಜದ ಅಭಿವೃದ್ಧಿಗೆ ಮಾರಕ ಉಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಕೆ.ಎನ್. ಪ್ರಭು, ಈಶ್ವರಪ್ಪ ಮೈದೋಳು, ಜಗದೀಶ್, ಪ್ರಸನ್ನ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.