ಕುಮಟಾ: ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದಂತೆ ಪ್ರವಾಹ ಸಂದರ್ಭದಲ್ಲಿ ಹಾನಿ ಪರಿಹಾರಕ್ಕೆ ನಿಗದಿಪಡಿಸಲಾದ ಮೊತ್ತವನ್ನೇ ಸಂತ್ರಸ್ತರಿಗೆ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಮಾಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ದುರಂತ ನಡೆದ ಕೆಲವೇ ಗಂಟೆಗಳಲ್ಲಿ ನಾನು ಆ ಸ್ಥಳದಲ್ಲಿದ್ದೆ. ಘಟನೆಯ ಭೀಕರತೆ ನೋಡಿದ್ದೇನೆ. ಇಂದು (ಶನಿವಾರ) ಪುನಃ ಶಿರೂರು ಗುಡ್ಡ ಕುಸಿತದ ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಕುಮಟಾಕ್ಕೆ ಬಂದಿದ್ದೇನೆ. ಅಲ್ಲಿ ದುರ್ಘಟನೆ ನಡೆದುಹೋಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮಾನವೀಯ ಸ್ಪಂದನ ನೀಡಬೇಕಾದ ಅಗತ್ಯವಿದೆ ಎಂದರು.
ಕಳೆದ ೧೨ ದಿನದಲ್ಲಿ ಮಾನವೀಯ ಸ್ಪಂದನ, ಸಹಾಯ, ಸಹಕಾರ ನೀಡಿದ್ದಾರೆ. ೮ ಜನರ ಮೃತದೇಹ ದೊರೆತಿದ್ದು ಇನ್ನೂ ೩ ಜನರ ಹುಡುಕಾಟ ನಡೆದಿದೆ. ಹುಡುಕುವ ವಿಷಯದಲ್ಲಿ ಕೇಂದ್ರದಿಂದ ಪ್ರಧಾನ ಮಂತ್ರಿಗಳು, ಸಚಿವ ಅಮಿತ್ ಶಾ ಅವರು ನಮ್ಮ ಕೋರಿಕೆಗೆ ಮನ್ನಿಸಿ ಅಗತ್ಯವಿರುವ ಸೇನೆಯ ತಂಡವನ್ನು ಕಳುಹಿಸಿಕೊಟ್ಟಿದ್ದಾರೆ. ಉಳಿದ ಎನ್ಡಿಆರ್ಎಫ್, ಎಸ್ಡಿಆರ್ಎಫ್, ನೌಕಾದಳ ಇನ್ನಿತರ ಎಲ್ಲ ರಕ್ಷಣಾ ತಂಡಗಳು ಕೂಡಾ ಕೇಂದ್ರ ಸರ್ಕಾರದ ಭಾಗವಾಗಿ ನಿರಂತರ ಕೆಲಸ ಮಾಡುತ್ತಾ ನಾಪತ್ತೆಯಾದವರ ಹುಡುಕಾಟದಲ್ಲಿದ್ದಾರೆ ಎಂದರು.ಘಟನಾ ವ್ಯಾಪ್ತಿಯಲ್ಲಿ ಗಂಗಾವಳಿ ಹೊಳೆಯಲ್ಲಿ ಮಣ್ಣು ತುಂಬಿಕೊಂಡಿದೆ. ಮಣ್ಣಿನ ರಾಶಿಯೊಳಗೆ ಲಾರಿ ಇರಬಹುದು ಎಂದು ಉಪಗ್ರಹ ಆಧರಿತ ಮಾಹಿತಿ ಇದೆ. ಲಾರಿ ಮೇಲೆ ೨೦ ಅಡಿ ಮಣ್ಣು, ಅದರೆ ಮೇಲೆ ನೀರು ವೇಗವಾಗಿ ಹರಿಯುತ್ತಿರುವುದರಿಂದ ಅಪಾಯ ಮತ್ತು ಕಷ್ಟದ ನಡುವೆಯೇ ಹುಡುಕಾಟ ನಡೆದಿದೆ. ಕಾರ್ಯಾಚರಣೆಯಲ್ಲಿರುವ ಎಲ್ಲರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ಉಳುವರೆಯಲ್ಲೂ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ಅಚ್ಚುಕಟ್ಟಾಗಿ ನಡೆದಿದೆ. ಅಲ್ಲಿಯೂ ಮೃತರ ಕುಟುಂಬದ ಜತೆ ಸಾಂತ್ವನ, ಸ್ಪಂದನ ಇದೆ ಎಂದರು.
ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಜೆಡಿಎಸ್ನ ಸೂರಜ ನಾಯ್ಕ, ಡಾ. ಜಿ.ಜಿ. ಹೆಗಡೆ, ಎಂ.ಜಿ. ಭಟ್ ಇತರರು ಇದ್ದರು. ಇದೇ ವೇಳೆ ಜಿಲ್ಲೆಯ ತೋಟಗಾರಿಕೆ ಬೆಳೆ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಕುಮಟಾ ಅಡಕೆ ಸೊಸೈಟಿ ವತಿಯಿಂದ ಅಧ್ಯಕ್ಷ ವಿ.ಐ. ಹೆಗಡೆ ಮನವಿ ಸಲ್ಲಿಸಿದರು.