ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜೋಡಿಕೋಡಿಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ
ಒಂದು ಕಾಲದಲ್ಲಿ ವಿದೇಶದಲ್ಲಿ ನಮ್ಮ ಬಂಗಾರ ಅಡವಿಟ್ಟು ಸಾಲ ತೆಗೆದುಕೊಂಡು ಬಂದಿದ್ದ ಭಾರತ ಇಂದು ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಗತ್ತಿನ 68 ರಾಷ್ಟ್ರಗಳಿಗೆ ಸಾಲ ನೀಡಿ ಪ್ರಪಂಚದಲ್ಲಿಯೇ ಆರ್ಥಿಕವಾಗಿ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜೋಡಿಕೋಡಿಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮೋದಿ ಸರ್ಕಾರ ಬಂದ ನಂತರ ದೇಶದಲ್ಲಿ ಭಯೋತ್ಪಾದಕರ ಸದ್ದಡ ಗಿಸಿದೆ. ನೆರೆ ರಾಷ್ಟ್ರಗಳಲ್ಲಿರುವ ಭಯೋತ್ಪಾದಕರ ತಾಣ ನಾಶಪಡಿಸುವ ಮಟ್ಟಕ್ಕೆ ನಮ್ಮ ರಕ್ಷಣಾ ವ್ಯವಸ್ಥೆ ಬಲಾಢ್ಯವಾಗಿದೆ ಎಂದು ಹೇಳಿದರು.ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇ. 26 ರಷ್ಟು ಬಡವರಿಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 22 ಲಕ್ಷ ಕ್ವಿಂಟಾಲ್ ಅಕ್ಕಿ ಉಚಿತವಾಗಿ ವಿತರಿಸುತ್ತಿದೆ. ಕೇಂದ್ರ ಸರ್ಕಾರದ ದೀನದಯಾಳ್ ಯೋಜನೆ ಯಡಿ ರಾಜ್ಯದಲ್ಲಿ ಸಾವಿರಾರು ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.
ಮಹಿಳೆಯರ ಗರ್ಭಕೋಶ ಕ್ಯಾನ್ಸರ್ ಚಿಕಿತ್ಸೆಗೆ ಕೇಂದ್ರ ಸರ್ಕಾರ ಲಸಿಕೆ ಅಭಿವೃದ್ಧಿಪಡಿಸಿದ್ದು, ಆ ಲಸಿಕೆಗೆ ₹12,000 ವೆಚ್ಚವಾಗುತ್ತಿದೆ. ಇದನ್ನು ಕ್ಯಾನ್ಸರ್ ಪೀಡಿತ ಪ್ರತಿ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಆದರ್ಶ ಗ್ರಾಮ ಯೋಜನೆ ಜಾರಿಗೆ ತಂದಿದೆ. ನಮ್ಮ ಸಂಸದರು ಸಹ ನರೇಂದ್ರ ಮೋದಿ ಹಾದಿಯಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಪ್ರತಿ ದಿನ ನೂರಾರು ಕಿ.ಮೀ. ಪ್ರವಾಸ ಮಾಡಿ ಅಭಿವೃದ್ಧಿ ಮತ್ತು ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನರ ಆರೋಗ್ಯ ದೃಷ್ಠಿಯಿಂದ ಆಯಷ್ಮಾನ್ ಆರೋಗ್ಯ ಕೇಂದ್ರವನ್ನು ನಮ್ಮ ಕ್ಷೇತ್ರಕ್ಕೆ ನೀಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬೇಲೇನಹಳ್ಳಿ ಸೋಮಶೇಖರ್, ಗುಳ್ಳದಮನೆ ವಸಂತಕುಮಾರ್, ಶಿವಕುಮಾರ್, ಗರಗದಹಳ್ಳಿ ಪ್ರತಾಪ್ ಮತ್ತು ಆಯಾ ಭಾಗದ ಸ್ಥಳೀಯ ಮುಖಂಡರಿದ್ದರು.
3ಕೆಟಿಆರ್.ಕೆ.15ಃ