- ಬಸವತತ್ವ ಪೀಠದಲ್ಲಿ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತ ಪ್ರಾಕೃತಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಂಪದ್ಭರಿತ ದೇಶವಾಗಿದ್ದು, ಇಡೀ ಜಗತ್ತು ಅತ್ಯಂತ ಗೌರವದಿಂದ ನೋಡುವಂತಹ ಆಧ್ಯಾತ್ಮಿಕ ಆತ್ಮತೃಪ್ತಿ ಹೊಂದಿದೆ ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ನುಡಿದರು.
ಬಸವತತ್ವ ಪೀಠದಲ್ಲಿ ಶನಿವಾರ ನಡೆದ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಚಿಕ್ಕಮಗಳೂರು ಜಿಲ್ಲೆ ಸೌಂದರ್ಯ ಭರಿತವಾಗಿದ್ದು, ಮಲೆನಾಡು, ಬಯಲು ಪ್ರದೇಶ ಹೊಂದಿರುವ ಅಪರೂಪದ ಜಿಲ್ಲೆ. ಐತಿಹಾಸಿಕ, ಧಾರ್ಮಿಕ ಕೇಂದ್ರಗಳ ಜೊತೆಗೆ ನಾನಾ ಕಾರಣಗಳಿಂದ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಈ ಜಿಲ್ಲೆಯಲ್ಲಿ ಬಸವತತ್ವ ಪೀಠ ಸ್ಥಾಪನೆಯಾಗಿರುವುದು ಆರ್ಥಪೂರ್ಣ ಎಂದರು.ಧರ್ಮ ಎನ್ನುವುದು ಸಾವಿರಾರು ವರ್ಷಗಳ ವಿಕಾಸವಾಗಿದ್ದು ಈ ಬಗ್ಗೆ ಆತ್ಮಸಾಕ್ಷಿ ನಿರಂತರವಾಗಿ ನಡೆದಿದೆ, ದೊಡ್ಡ ಪರಂಪರೆ ದೇಶದಲ್ಲಿ ಬೆಳೆದಿದೆ. 12ನೇ ಶತಮಾನದಲ್ಲಿ ಆಧ್ಯಾತ್ಮಿಕ ತಿರುವು, ಆಧ್ಯಾತ್ಮಕ ಮಗ್ಗಲು ಬದಲಿಸಿದವರು ವಿಶ್ವಗುರು ಬಸವಣ್ಣನವರು. ಅವರ ಬದುಕೇ ಒಂದು ಪ್ರಯೋಗ ಶಾಲೆಯಾಗಿತ್ತು ಎಂದು ಹೇಳಿದರು.ಕಾನೂನಿನ ನೆರಳಿನಿಂದ ಮಾಡಲು ಅಸಾಧ್ಯವಾಗಿರುವುದನ್ನು ಹೃದಯ ವೈಶಾಲ್ಯತೆಯಿಂದ ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ವಚನಗಳ ಮೂಲಕ ತೋರಿಸಿದವರು ಬಸವಣ್ಣ ಎಂದರು. ಕರ್ನಾಟಕ ರಾಜ್ಯದ ಸಾಕ್ಷರತೆ ಗಮನಿಸಿದರೆ ಬೇರೆ ರಾಜ್ಯಗಳಿಗಿಂತ ಸಾಕ್ಷರತೆ ಪ್ರಮಾಣ ಇಲ್ಲಿ ಹೆಚ್ಚಾಗಿದೆ. ರಾಜ್ಯದ ಮಠಮಾನ್ಯಗಳ ಕೊಡುಗೆ ಸಾಕ್ಷರತೆ ಬೆಳವಣಿಗೆಗೆ ಪೂರಕವಾಗಿದ್ದು, ಮಠಮಾನ್ಯಗಳು ಲೌಖಿಕ ಬದುಕಿನ ಜೊತೆಗೆ ಆಧ್ಯಾತ್ಮಿಕತೆ ಪಸರಿಸುವ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ಬಸವತತ್ವ ಪೀಠದ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡ ಲಾಗಿದೆ. ಹಾಗೆ ಭಕ್ತರು ಹಳೆ ಮನಸ್ಸನ್ನು ಕೆಡವಿ ಹೊಸ ಮನಸನ್ನು ಕಟ್ಟಬೇಕು ಆಗ ಮಾತ್ರ ಬಸವತತ್ವ ಸಮಾವೇಶದ ಆಶೋತ್ತರ ಪೂರೈಸಿದಂತಾಗುತ್ತದೆ ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಸಾಮಾಜಿಕ, ಧಾರ್ಮಿಕ ಭಾವನೆ ಈ ಕ್ಷೇತ್ರದ ಜನರಲ್ಲಿ ಮೂಡಲು ಡಾ.ಬಸವ ಮರುಳಸಿದ್ಧ ಸ್ವಾಮಿ ಕಾರಣಕರ್ತರು. ಭಕ್ತರ ಕಡೆ ಗುರುಗಳ ನಡಿಗೆ ಎಂಬ ಬಸವತತ್ವ ಸಮಾವೇಶ ನಡೆಸುವ ಮೂಲಕ ಜನರಿಗೆ ಬಸವಾದಿ ಶರಣರ ತತ್ವಗಳನ್ನು ಮನವರಿಕೆ ಮಾಡಿದ್ದು, ಕೇವಲ ಚಿಕ್ಕಮಗಳೂರಿಗೆ ಸೀಮಿತವಾಗಿದ್ದ ಬಸವತತ್ವ ಪೀಠವನ್ನು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಿಗೆ ಶ್ರೀಗಳು ವಿಸ್ತರಿಸಿದ್ದಾರೆ ಎಂದರು.
ಇಂದು ಒಂದೇ ವೇದಿಕೆಯಲ್ಲಿ ವಿವಿಧ ಮಠಗಳ ಎಂಟು ಮಠಗಳ ಜಗದ್ಗುರುಗಳು ಆಸೀನರಾಗಿರುವುದನ್ನು ನೋಡುವುದೇ ನಮ್ಮೆಲ್ಲರ ಸೌಭಾಗ್ಯ, ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಶ್ರೀಮಠಕ್ಕೆ 3 ಕೋಟಿ ಅನುದಾನ ನೀಡಿದ್ದರು ಎಂದು ಹೇಳಿದರು.ಸರ್ಕಾರಕ್ಕೆ ಸಮಾನವಾಗಿ ವೀರಶೈವ ಲಿಂಗಾಯಿತ ಮಠಗಳು ಜ್ಞಾನ, ಶಿಕ್ಷಣ, ಅನ್ನದಾಸೋಹ ನಡೆಸುತ್ತಾ ಬರುತ್ತಿದ್ದು, ವಚನಗಳ ಮೂಲಕ ಬಸವಣ್ಣ ತಮ್ಮ ತತ್ವಗಳನ್ನು ಸಮಾಜದಲ್ಲಿ ಬಿಂಬಿಸುವ ಮೂಲಕ ಜಗತ್ತಿಗೆ ಬೆಳಕಾಗಿದ್ದರು ಎಂದು ಹೇಳಿದರು.ಸರ್ಕಾರದ ₹1.50 ಕೋಟಿ ಅನುದಾನದ ಜೊತೆಗೆ ಭಕ್ತರ ದೇಣಿಗೆಯಿಂದ ಸುಮಾರು ₹3.50 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಗುರುವಿನ ನಡಿಗೆ ಭಕ್ತರ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಡಾ. ಬಸವ ಮರುಳಸಿದ್ಧ ಸ್ವಾಮಿ ಭಕ್ತರನ್ನು ಸಂಪರ್ಕಿಸಿ ಧರ್ಮ ಜಾಗೃತಿ ಮೂಡಿಸಿ ಭಾವನಾತ್ಮಕ ಸಂಬಂಧ ವನ್ನು ಇನ್ನಷ್ಟು ಗಟ್ಟಿಗೊಳಿಸಿದರು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸಿದ್ದಸಂಸ್ಥಾನ ಮಠದ ನಿರಂಜನ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿ, ಶಿವಮೊಗ್ಗದ ಮುರುಘ ರಾಜೇಂದ್ರ ಸಂಸ್ಥಾನ ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿ, ಗದಗದ ಸಿದ್ದರಾಮ ಸ್ವಾಮೀಜಿ, ಪುಷ್ಪಗಿರಿಯ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡಿದರು. ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಡಾ.ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕೆ.ಸಿ. ವಿರೂಪಾಕ್ಷ, ಗಾಯತ್ರಿ ಶಾಂತೇಗೌಡ, ಬಿ.ಎಚ್. ಹರೀಶ್, ಎಂ.ಸಿ. ಶಿವಾನಂದಸ್ವಾಮಿ, ಮಹಡಿಮನೆ ಸತೀಶ್, ಚಿದಾನಂದ್, ಡಾ.ಎಸ್. ವಿನಾಯಕ್,ಎಚ್.ಎಸ್. ರಾಜ ಶೇಖರ್, ಬಿ.ಆರ್.ಲೋಕೇಶ್, ಎ.ಆರ್.ರವಿ, ಪೌರಾಯುಕ್ತ ಬಸವರಾಜ್ ಉಪಸ್ಥಿತರಿದ್ದರು. 1 ಕೆಸಿಕೆಎಂ 7ಚಿಕ್ಕಮಗಳೂರಿನ ಬಸವತತ್ವ ಪೀಠದಲ್ಲಿ ಶನಿವಾರ ನಡೆದ ಬಸವತತ್ವ ಸಮಾವೇಶವನ್ನು ಸಿರಿಗೆರೆ ತರಳಬಾಳು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಶಾಸಕ ತಮ್ಮಯ್ಯ, ಎಂಎಲ್ಸಿ ಸಿ.ಟಿ. ರವಿ ಇದ್ದರು.
------------------------------