ವಿವಿಧತೆಯಲ್ಲೂ ಏಕತೆ ಸಾಧಿಸಿದ ಸಶಕ್ತ ರಾಷ್ಟ್ರ ಭಾರತ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Aug 16, 2024 12:56 AM

ದೇಶಾಭಿಮಾನಿಗಳ ತ್ಯಾಗ ಬಲಿದಾನದಿಂದ ಬಂದ ಸ್ವತಂತ್ರ ಭಾರತ ಅಭಿವೃದ್ಧಿಯಲ್ಲಿಯೂ ಮುನ್ನಡೆ ಸಾಧಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ವಿಶ್ವದಲ್ಲಿ ಹಲವು ರಾಷ್ಟ್ರಗಳು ಭಾರತವನ್ನು ಛಿದ್ರಗೊಳಿಸುವ ಷಡ್ಯಂತ್ರ ನಡೆಸಿದ್ದು, ಅದಕ್ಕೆ ಭಾರತ ಬಗ್ಗುವುದಿಲ್ಲ. ಭಾರತೀಯರಾದ ನಾವು ವಿವಿಧತೆಯಲ್ಲಿಯೂ ಏಕತೆ ಸಾಧಿಸಿದ ಸಶಕ್ತ ರಾಷ್ಟ್ರ ಪ್ರೇಮಿಗಳು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಗುರುವಾರ ಹಾನಗಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ೭೮ನೇ ಸ್ವಾತಂತ್ರ್ಯ ದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಸ್ವತಂತ್ರ ಭಾರತ ಸುಭದ್ರ ಭಾರತವಾಗಲು ಎಲ್ಲರೂ ಕೈ ಜೋಡಿಸುವ ಜೊತೆಗೆ, ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಳ್ಳಕು. ದೇಶಾಭಿಮಾನ ಸ್ವಾಭಿಮಾನ ನಮ್ಮ ಉಸಿರಾದರೆ ಈ ರಾಷ್ಟ್ರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ದೇಶಾಭಿಮಾನಿಗಳ ತ್ಯಾಗ ಬಲಿದಾನದಿಂದ ಬಂದ ಸ್ವತಂತ್ರ ಭಾರತ ಅಭಿವೃದ್ಧಿಯಲ್ಲಿಯೂ ಮುನ್ನಡೆ ಸಾಧಿಸಿದೆ. ಇಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಹಾನಗಲ್ಲ ತಾಲೂಕಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ೫ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ೪೧ ಸಾವಿರ ಕುಟುಂಬಗಳು ಪಡೆದುಕೊಂಡಿವೆ. ಉತ್ತಮ ಮಳೆ ಹಾಗೂ ಏತ ನೀರಾವರಿ ಯೋಜನೆಗಳಿಂದ ೩೫೦ ಕೆರೆಗಳು ತುಂಬಿವೆ. ೧೦೦ ಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್ ಸೌಲಭ್ಯ ಒದಗಿಸಲಾಗಿದೆ. ತಾಲೂಕಿನ ಅಕ್ಕಿಆಲೂರು ಹಾಗೂ ಹಾನಗಲ್ಲನಲ್ಲಿ ಪಿಎಂಶ್ರೀ ಶಾಲೆಗಳು ಆರಂಭವಾಗುತ್ತಿವೆ. ಈ ದೇಶದ ಪ್ರಜೆಗಳು ಸರಕಾರಕ್ಕೆ ನೀಡಬೇಕಾದ ಕರವನ್ನು ನೀಡಿ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು ಎಂದರು.

ತಹಸೀಲ್ದಾರ್ ಎಸ್. ರೇಣುಕಮ್ಮ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿ ಪ್ರಜೆ ತನ್ನ ಶಕ್ತಿ ಸಾಮರ್ಥ್ಯವನ್ನು ವಿನಿಯೋಗಿಸಬೇಕು. ಭಾರತ ಸ್ವಾತಂತ್ರ್ಯಕ್ಕಾಗಿ ನಮ್ಮ ದೇಶಭಕ್ತರ ತ್ಯಾಗ ಬಲಿದಾನದ ಅವರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಸಮಸ್ಯೆ ಮುಕ್ತ ಭಾರತದ ಕನಸು ನನಸಾಗಲು ನಾವೆಲ್ಲ ಒಟ್ಟಾಗಿ ಶ್ರಮಿಸೋಣ ಎಂದರು.

ಇದೇ ಸಂದರ್ಭದಲ್ಲಿ ನೌಕಾ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ಹಾಗನಲ್ಲ ತಾಲೂಕಿನ ಹೇಮಂತ ಬೆಟಗೇರಿ ಅವರನ್ನು ಸೇರಿದಂತೆ ಪ್ರತಿಭಾವಂತರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ರಾಷ್ಟ್ರಪ್ರೇಮ ಬಿಂಬಿಸುವ ನೃತ್ಯ ರೂಪಕಗಳು ಪ್ರದರ್ಶನಗೊಂಡವು.

ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪುಟ್ಟಪ್ಪ ನರೇಗಲ್ಲ, ವೀರೇಶ ಬೈಲವಾಳ, ಪುರಸಭೆ ಸದಸ್ಯರಾದ ಸುನಕವ್ವ ಚಿಕ್ಕಣ್ಣನವರ, ಗಂಗಾಬಾಯಿ ನಿಂಗೋಜಿ, ಮಮತಾ ಆರೇಗೊಪ್ಪ, ನಾಗಪ್ಪ ಸವದತ್ತಿ, ಶೋಭಾ ಉಗ್ರಣ್ಣನವರ, ಗಣ್ಯರಾದ ಗುರುರಾಜ ನಿಂಗೋಜಿ, ಎಸ್.ಎಂ. ಕೋತಂಬರಿ, ಸುರೇಶ ನಾಗಣ್ಣನವರ ಮೊದಲಾದವರು ಇದ್ದರು.