ಕುವೆಂಪು ಕ್ರೀಡಾಂಗಣದಲ್ಲಿ 76 ನೇ ಗಣ ರಾಜ್ಯೋತ್ಸವ ಸಮಾರಂಭ
ಕನ್ನಡಪ್ರಬ ವಾರ್ತೆ, ನರಸಿಂಹರಾಜಪುರಭಾರತ ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನ ಹೊಂದಿದ ದೇಶವಾಗಿದೆ ಎಂದು ತಹಸೀಲ್ದಾರ್ ತನುಜಾ ಟಿ.ಸವದತ್ತಿ ತಿಳಿಸಿದರು.
ಭಾನುವಾರ ಕುವೆಂಪು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ರಾಷ್ಟ್ರ ದ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವೇ ಪ್ರಜಾ ಪ್ರಭುತ್ವ. ಪ್ರಜಾಪ್ರಭುತ್ವವ ಜಾತ್ಯಾತೀಯತೆಯನ್ನು ಎತ್ತಿ ಹಿಡಿಯುತ್ತದೆ. ನಮ್ಮ ಸಂವಿಧಾನ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂದು ಮೂರು ಅಂಗಗಳಾಗಿ ವಿಭಜಿಸಲಾಗಿದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನು ಸಹ ಸಂವಿಧಾನಕ್ಕೆ ಅನುಗುಣವಾಗಿರಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಸಂವಿಧಾನ ಎಂಬುದು ಭಾರತ ದೇಶದ ಪವಿತ್ರ ಗ್ರಂಥ. ಬೇರೆ, ಬೇರೆ ಧರ್ಮದವರಿಗೆ ಬೇರೆಯಾದ ಧರ್ಮ ಗ್ರಂಥವಿದ್ದರೆ ಭಾರತ ದೇಶದ ಎಲ್ಲಾ ಪ್ರಜೆಗಳಿಗೆ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ಬಂದಿದೆ. ದುರ್ಬಲ ವರ್ಗದವರು, ಹಿಂದುಳಿದ ವರ್ಗದವರು ಅಧಿಕಾರಕ್ಕೆ ಬರಲು ನಮ್ಮ ದೇಶದ ಸಂವಿಧಾನವೇ ಕಾರಣ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಮಾತನಾಡಿ, ಭಾರತ ದೇಶದ ಪ್ರಜೆಗಳು ಬೇರೆ, ಬೇರೆ ಜಾತಿ, ಧರ್ಮದಲ್ಲಿ ಹುಟ್ಟಿದ್ದರೂ ನಾವೆಲ್ಲರೂ ಭಾರತೀಯರಂತೆ, ಸಹೋದರರಂತೆ ಬ್ರಾತೃತ್ವದಿಂದ ಬದುಕೋಣ ಎಂದರು.ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಾದ ಅಕ್ಕಮಹಾದೇವಿ, ಪಿ.ಮಾನ್ಯ, ಆರ್.ಶೋಭಾ, ಎನ್.ಅಮೃತ, ಎಸ್.ಸುಷ್ಮಾ,ಎಚ್.ವಿ.ಪಲ್ಲವಿ, ದೇವಯಾನಿ, ಸಾಂದ್ರ ಮರಿಯಾ, ಎ.ಎಸ್.ನೇಹಾ, ಅವನಿ ಎಂ. ಗೌಡ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಪೊಲೀಸ್, ಹೋಂ ಗಾರ್ಡ್ಸ್, ವಿವಿಧ ಶಾಲೆಗಳ ಮಕ್ಕಳಿಂದ ಪಥ ಸಂಚಲನ ನಡೆಯಿತು.ಸಭೆ ಅಧ್ಯಕ್ಷತೆ ಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಬಾನು ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ, ಸದಸ್ಯರಾದ ಮುಕುಂದ, ಮುನಾವರ್ ಪಾಷಾ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕ.ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ತಾ.ಜಾನಪದ ಪರಿಷತ್ ಅಧ್ಯಕ್ಷೆ ಜಯಂತಿ, ಮುಖಂಡರಾದ ಎಚ್.ಎಂ. ಶಿವಣ್ಣ, ಡಿ.ರಾಮು, ವಾಲ್ಮೀಕಿ ಶ್ರೀನಿವಾಸ, ಸುಧಾಕರ, ರಜಿ, ಸುಬ್ರಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ಗುಣಪಾಲ್ ಜೈನ್ ಮತ್ತಿತರರು ಇದ್ದರು.