ಸಂಡೂರು: ಪಟ್ಟಣದ ಸಂಡೂರು ರೆಷಿಡೆನ್ಷಿಯಲ್ ಶಾಲೆಯ (ಎಸ್.ಆರ್.ಎಸ್) ಕ್ರೀಡಾಂಗಣದಲ್ಲಿ ಸೋಮವಾರ ೭೭ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಘೋರ್ಪಡೆ ಮಾತನಾಡಿ, ನಮ್ಮ ದೇಶವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಂದು ನಾವು ೭೭ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇಂದು ನಾವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರಿಗೆ ಗೌರವ ಸಲ್ಲಿಸಬೇಕಾದ ದಿನ, ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ ಹಾಗೂ ಅನನ್ಯ. ಭಾರತಕ್ಕೆ ಸ್ವಾತಂತ್ರ್ಯವು ಸುಮ್ಮನೆ ಬಂದುದಲ್ಲ. ದೇಶಭಕ್ತರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ಬಂದುದಾಗಿದೆ. ಅವರ ಬಲಿದಾನ ಚಿರಸ್ಮರಣೀಯವಾದುದು ಎಂದರು. ನಮ್ಮ ದೇಶವು ಅನೇಕ ಸಂಸ್ಕೃತಿಗಳ ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ ಎಂದು ಹೇಳಿದರು. ಡಾ. ಬಿ.ಆರ್. ಆಂಬೇಡ್ಕರ್ ನೇತೃತ್ವದ ನಮ್ಮ ಸಂವಿಧಾನ ನಿರ್ಮಾತೃಗಳನ್ನು ಸ್ಮರಿಸುವ ದಿನವೂ ಹೌದು ಎಂದು ಹೇಳಿದರು. ಶಾಲಾ ಮಕ್ಕಳಿಂದ ನಡೆದ ಪರೇಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಎನ್ ಸಿ ಸಿ ಪರೇಡ್ ನಡೆಯಿತು.
ವಿದ್ಯಾರ್ಥಿಗಳಾದ ಹರ್ಷಿತ, ಮಹಮ್ಮದ್ ರಫಿ ಹಾಗೂ ಕೆ. ಉಮ್ಮುಲ್ ಹುಡ ಅವರು ಗಣರಾಜೋತ್ಸವದ ಕುರಿತು ಮಾತನಾಡಿದರು. ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆಶಿಯಾಬಾನು, ಶಾಲೆಯ ಪ್ರಾಚಾರ್ಯ ಮುರುಳಿಕೃಷ್ಣ, ಉಪ ಪ್ರಾಚಾರ್ಯರಾದ ಗೀತಾಂಜಲಿ, ಆಡಳಿತಾಧಿಕಾರಿಯಾದ ಸಂಜೀವ್, ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಮುಸಾವರ್ ಬಿ. ಎಚ್. ಮತ್ತು ಶಹನ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಜಿಯಾ ಸ್ವಾಗತಿಸಿದರೆ, ಫಾಲಕ್ನಾಜ್ ವಂದಿಸಿದರು.