ಕನ್ನಡಪ್ರಭವಾರ್ತೆ ಸಾಗರ
ಪಟ್ಟಣದ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಸ್ಪರ್ಧೆ ದೇಶ ಮತ್ತು ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಪಕ್ಷದ, ಪರಿವಾರದ ಅನೇಕ ಹಿರಿಯರು ನನಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಹಣ ಮತ್ತು ಧರ್ಮದ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಂತಿಮವಾಗಿ ಧರ್ಮಕ್ಕೆ ಜಯ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ. ಬಿಜೆಪಿಯವರು ಎಲ್ಲಾ ಲಿಂಗಾಯತರು ನಮ್ಮ ಕಡೆ ಇದ್ದಾರೆ ಎನ್ನುತ್ತಾರೆ. ಆದರೆ, ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಜಾತಿ ಹೆಸರು ಹೇಳಿಕೊಂಡು ಮೋಸ ಮಾಡಿದವರಿಗೆ ಈಶ್ವರಪ್ಪನ ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಭದ್ರಾವತಿಯ ಒಕ್ಕಲಿಗ ಸಮಾಜದವರು ಹೇಳಿದ್ದಾರೆ ಎಂದು ತಿಳಿಸಿದರು.ಬೈಂದೂರಿನಲ್ಲಿಯೂ ಸಹ ಹಿಂದೂ ಸಂಘಟನೆಯ ಅನೇಕ ಪ್ರಮುಖರು ನಾವೆಲ್ಲರೂ ನಿಮಗೆ ಬೆಂಬಲವಾಗಿದ್ದೇವೆ. ಚುನಾವಣೆಯಲ್ಲಿ ನೀವು ನೂರಕ್ಕೆ ನೂರು ಗೆಲ್ಲುತ್ತೀರಾ ಎಂದು ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಎಂದರೆ ಜಾತಿ ಹಣ ತೋಳ್ಬಲದಿಂದ ನಡೆಯುತ್ತೆ ಎಂದು ತಿಳಿದಿದ್ದೆ. ಆದರೆ, ಜಾತಿ ಹಣ ಎಲ್ಲಾ ಪಕ್ಕಕ್ಕೆ ಇಟ್ಟು ಬಡವರು ಧರ್ಮದ ಪರವಾಗಿ ನಿಂತು ಧರ್ಮ ಗೆಲ್ಲಿಸಲು ನೀವೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ನೋಡಿದರೆ ನನ್ನ ಗೆಲ್ಲುವು ನಿಶ್ಚಯವಾಗಿದೆ ಎಂದರು.
ಸಮಾವೇಶದಲ್ಲಿ ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಪ್ರಕಾಶ್ ಕುಂಠೆ, ಪ್ರಮುಖರಾದ ಎಸ್.ಎಲ್.ಮಂಜುನಾಥ್, ಸತೀಶ್ ಗೌಡ ಅದರಂತೆ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ಸುರೇಶ್ ವಾಟಗೋಡು, ಉಮೇಶ್ ಚೌಟಗಿ, ಅಣ್ಣಪ್ಪ, ಸವಿತಾ ಗೋಪಾಲ್, ನಾಗರಾಜ್ ಮತ್ತಿತರರು ಇದ್ದರು.
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕದಂತೆ ಕುತಂತ್ರ ಮಾಡಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದ್ದೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.ಕೆಲವರು ನಾನು ಮೋದಿ ಅವರ ಭಾವಚಿತ್ರ ಹಾಕದಂತೆ ತಡೆಯಾಜ್ಞೆ ತರಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಹಾಕಿಕೊಂಡಿದ್ದೇನೆ. ನಾನು ಲೋಕಸಭೆ ಚುನಾವಣೆ ಗೆದ್ದ ನಂತರ ಮತ್ತೆ ಮೋದಿಯವರ ಜೊತೆಗೆ ಹೋಗುತ್ತೇನೆ. ನರೇಂದ್ರ ಮೋದಿ ವಿಶ್ವನಾಯಕ. ದೇಶದ ಪ್ರತಿಯೊಬ್ಬ ಜನಸಾಮಾನ್ಯರೂ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕೋಟ್ಯಾಂತರ ಜನರು ಕನಸು ಕಾಣುತ್ತಿದ್ದಾರೆ. ಅಂಥವರ ಫೋಟೋವನ್ನು ನಾನು ಬಳಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.