ಸಿನಿಮಾದಲ್ಲಿ ಹೊಸತನ ಅಳವಡಿಸಿಕೊಳ್ಳುವುದು ಅನಿವಾರ್ಯ: ಹಿರಿಯ ನಟ ಪ್ರಕಾಶ್‌ ಬೆಳವಾಡಿ

KannadaprabhaNewsNetwork |  
Published : Feb 05, 2024, 01:49 AM IST
1 | Kannada Prabha

ಸಾರಾಂಶ

ಚಿತ್ರಗಳ ಚಲನೆಯೇ ಸಿನಿಮಾ. ಅವುಗಳ ಚಿತ್ರೀಕರಣಕ್ಕೆ ಮೊದಲೇ ಸಂಕಲನದ ಕೆಲಸ ನಡೆಯಬೇಕಾದ ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಧ್ಯಮವನ್ನು ಮಾನಸಿಕವಾಗಿ, ಸೈದ್ಧಾಂತಿಕವಾಗಿ ಮನುಷ್ಯರನ್ನು ಬದಲಾಯಿಸಲು ಬಳಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಏಕೆ ಅಂತಹ ತಿಳಿವಳಿಕೆಯ ಕೊರತೆ ಎದುರಿಸುತ್ತಿದೆ ಎನ್ನುವ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ಕಾಲದ ತಂತ್ರಜ್ಞಾನ ವೇಗಕ್ಕೆ ಅನುಗುಣವಾಗಿ ಪ್ರಸ್ತುತ ಸಿನಿಮಾದಲ್ಲಿ ಹೊಸತನ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ನಟ ಪ್ರಕಾಶ್‌ ಬೆಳವಾಡಿ ತಿಳಿಸಿದರು.

ನಗರದ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಮೈಸೂರು ಸಿನಿಮಾ ಸೊಸೈಟಿಯು ಆಯೋಜಿಸಿರುವ ‘ಪರಿದೃಶ್ಯ’- ಎರಡು ದಿನಗಳ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಉತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಗಳ ಚಲನೆಯೇ ಸಿನಿಮಾ. ಅವುಗಳ ಚಿತ್ರೀಕರಣಕ್ಕೆ ಮೊದಲೇ ಸಂಕಲನದ ಕೆಲಸ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಧ್ಯಮವನ್ನು ಮಾನಸಿಕವಾಗಿ, ಸೈದ್ಧಾಂತಿಕವಾಗಿ ಮನುಷ್ಯರನ್ನು ಬದಲಾಯಿಸಲು ಬಳಸಿಕೊಳ್ಳಲಾಗುತ್ತಿದೆ. ಸಿನಿಮಾ ನಿರ್ಮಾಣದ ಹಿಂದಿನ ತಾಂತ್ರಿಕತೆ ಹಾಗೂ ಸಿನಿಮಾ ಮಾಧ್ಯಮದ ಮುಖಾಂತರ ಸಮಾಜಕ್ಕೆ ನಾವು ಏನೆಲ್ಲಾ ಕೊಡಬಹುದು ಎನ್ನುವ ತಿಳುವಳಿಕೆ ಅಗತ್ಯ. ದೇಶದಲ್ಲಿ ಏಕೆ ಅಂತಹ ತಿಳಿವಳಿಕೆಯ ಕೊರತೆ ಎದುರಿಸುತ್ತಿದೆ ಎನ್ನುವ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದರು.

ಸಿನಿಮಾ ಮಾಧ್ಯಮ ಮತ್ತು ಅದರ ತಾಂತ್ರಿಕ ಕೌಶಲ್ಯಗಳು ಉದ್ಯೋಗ, ಉದ್ಯಮ, ಶಿಕ್ಷಣ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಬಳಸಿಕೊಳ್ಳಬಹುದಾದ ಒಂದು ಅತ್ಯಗತ್ಯವಾದ ಮಾಧ್ಯಮವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕೃತಕ ಬುದ್ದಿಮತ್ತೆಯ (ಎಐ) ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಅದು ಸಿನಿಮಾಕ್ಕೆ ಸಂಬಂಧಿಸಿದ ಅನೇಕ ಕೆಲಸ ನಿರ್ವಹಿಸುತ್ತದೆ. ಕಥೆ, ಹಾಡು, ಸಂಭಾಷಣೆ, ಸಂಗೀತ ಸಂಯೋಜನೆಗಳನ್ನು ಮಾಡುತ್ತಿದೆ. ಇದರಿಂದ ಅದಕ್ಕಾಗಿ ಕೆಲಸ ಮಾಡುತ್ತಿರುವವರಲ್ಲಿ ಅನಿಶ್ಚಿತತೆ ಕಾಡುತ್ತಿದೆ. ಹೀಗಾಗಿಯೇ, ಕೃತಕ ಬುದ್ದಿಮತ್ತೆಯನ್ನು ಸಿನಿಮಾ ರಂಗದಲ್ಲಿ ಬಳಸಬಾರದು ಎಂಬ ಬೇಡಿಕೆ ಇಟ್ಟು ಹಾಲಿವುಡ್‌ ನ 11500 ಬರಹಗಾರರು ಪ್ರತಿಭಟಿಸಿದ್ದರು ಎಂದರು.

ನಟನಂತೆ ಭಾವನೆಗಳನ್ನು ಹೊರಹಾಕಲು ರೋಬಟ್‌ ಗಳಿಗೆ ಸಾಧ್ಯವಾಗದೇ ಇರಬಹುದು. ಆದರೆ, ಸಿನಿಮಾದ ಉಳಿದ ಕೆಲಸಗಳು ಸಾಧ್ಯ. ಈ ಯುಗದ ವೇಗಕ್ಕೆ ಹೊಂದಿಕೊಂಡು ಚಲಿಸಬೇಕಿದೆ. ಆದರೆ, ಭಾರತದಲ್ಲಿ ಆ ರೀತಿಯ ಬದಲಾವಣೆಗೆ ಇಲ್ಲಿನ ವ್ಯವಸ್ಥೆ ಬಿಡುತ್ತಿಲ್ಲ. ಸಾಹಿತ್ಯದ ರೀತಿಯಲ್ಲಿ ಸಿನಿಮಾವನ್ನು ಗ್ರಹಿಸುವುದು ಅಸಾಧ್ಯ ಎಂಬುದನ್ನು ಅರಿತು ತಂತ್ರಜ್ಞಾನದ ಬಗ್ಗೆಯೂ ಗಮನಹರಿಸಬೇಕು ಎಂದರು.

ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ, ಶರಣಪ್ಪ ವಿ. ಹಲಸೆ, ಮೈಸೂರು ಸಿನಿಮಾ ಸೊಸೈಟಿ ಅಧ್ಯಕ್ಷ ಜಿ.ಆರ್. ಚಂದ್ರಶೇಖರ್ ಇದ್ದರು.

20 ದೇಶಗಳ 300 ಹೆಚ್ಚು ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರಗಳು ಸ್ಪರ್ಧಿಸಿರುವ ಈ ಉತ್ಸವದ ಅಂತಿಮ ಹಂತದಲ್ಲಿ 25 ಪ್ರಶಸ್ತಿಗಳು ಭಾನುವಾರ ಘೋಷಣೆಯಾಗಲಿವೆ.

ಸಿನಿಮಾದಲ್ಲಿನ ಕಾರ್ಯದ ಬಗ್ಗೆ ಅರಿತ ಬಳಿಕ ಸಿನೆಮಾ ವಿಮರ್ಶೆ ಮಾಡಬೇಕು. ಇಂದಿನ ಮಿಮರ್ಶಕರಿಗೆ ಸಿನೆಮಾ ಎಂದರೇನು ಎಂಬ ಬಗ್ಗೆಯೇ ಸ್ಪಷ್ಟತೆಯಿಲ್ಲ.

- ಪ್ರಕಾಶ್ ಬೆಳವಾಡಿ, ನಟ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿಗೆ ಆಸೆಗಳೇ ಇಂಧನ: ಜಿ.ಎಲ್.ತ್ರಿಪುರಾಂತಕ
ಸುಂಟಿಕೊಪ್ಪದ ಇಮ್ಮಾನುವೆಲ್ ದೇವಾಲಯದಲ್ಲಿ ಮಹಿಳಾ ಕ್ರಿಸ್ಮಸ್ ಆಚರಣೆ