ಬಿರ್ಸಾ ಮುಂಡಾ ಬುಡುಕಟ್ಟು ಸಮುದಾಯಕ್ಕೆ ಸ್ಫೂರ್ತಿ: ಮುನಿರಾಜು

KannadaprabhaNewsNetwork | Published : Nov 16, 2024 12:36 AM

ಸಾರಾಂಶ

ಭಾರತ ಸರ್ಕಾರದ ನೆಹರು ಯುವ ಕೇಂದ್ರ ರಂಗವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಭೋಗಾಪುರದಲ್ಲಿರುವ ಪ.ಜಾ-ಪ.ವರ್ಗ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಜನಜಾತಿಯ ದಿವಸ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಗವಾನ್ ಬಿರ್ಸಾ ಮುಂಡ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ ಬುಡಕಟ್ಟು ಸಮುದಾಯದ ಸ್ಫೂರ್ತಿಯ ಸಂಕೇತವಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್.ಮುನಿರಾಜು ಹೇಳಿದರು.

ಭಾರತ ಸರ್ಕಾರದ ನೆಹರು ಯುವ ಕೇಂದ್ರ ರಂಗವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಭೋಗಾಪುರದಲ್ಲಿರುವ ಪ.ಜಾ-ಪ.ವರ್ಗ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಜನಜಾತಿಯ ದಿವಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 1875 ನವೆಂಬರ್ 15 ರಂದು ರಾಂಚಿಯ ವುಲಿಹಾತು ಗ್ರಾಮದಲ್ಲಿ ಜನಿಸಿದ ಬಿರ್ಸಾ ಮುಂಡ ಅವರು, ಬುಡಕಟ್ಟು ಸಮುದಾಯದ ಜಾನಪದ ಬಂಡಾಯ ಬುಡಕಟ್ಟು ಸ್ವಾತಂತ್ರ್ಯ, ಧಾರ್ಮಿಕ ಮುಖಂಡರಾಗಿ ಮುಂಡ ಸಮುದಾಯವು ಎದುರಿಸುತ್ತಿರುವ ಕಷ್ಟಗಳನ್ನು ಕಣ್ಣಾರೆ ಕಂಡು ಅವರ ಹಕ್ಕುಗಳಿಗಾಗಿ ಮಾತ್ರವಲ್ಲದೆ ಸಾಮಾಜಿಕ ಆರ್ಥಿಕ ಸುಧಾರಣೆಗಳು ಮತ್ತು ಬುಡಕಟ್ಟು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಹೋರಾಡಿದ ಅಪ್ರತಿಮ ದೇಶಭಕ್ತ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಕೇವಲ 25 ವರ್ಷ ಬದುಕಿದ್ದ ಬುಡಕಟ್ಟು ಸಮುದಾಯದ ಮಹಾನ್ ನಾಯಕ ಬಿರ್ಸಾಮುಂಡ ಅವರು, ಬುಡಕಟ್ಟು ಜನಾಂಗದ ಪ್ರತಿರೋಧ ಮತ್ತು ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ಪುರುಷ. ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಲು ಮತ್ತು ಅವರ ಸಾಂಸ್ಕೃತಿಕ ಗುರುತನ್ನು ಕಾಪಾಡಲು ಅವರ ಪ್ರಯತ್ನಗಳು ಭಾರತೀಯ ಇತಿಹಾಸದಲ್ಲಿ ಶಾಶ್ವತ ಪ್ರಭಾವವನ್ನು ಬೀರಿವೆ ಎಂದು ಹೇಳಿದರು.ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿ, ನೆಹರು ಯುವ ಕೇಂದ್ರ ಹಮ್ಮಿಕೊಂಡಿರುವ ಜನಜಾತಿಯ ಗೌರವ ದಿವಸ್ ಮಹತ್ವವನ್ನು ವಿವರಿಸಿ ಬುಡಕಟ್ಟು ಜನರ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್ ಪುರುಷ ಬಿರ್ಸಾ ಮುಂಡಾ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಬುಡಕಟ್ಟು ಸೋಲಿಗ ಮಹಿಳೆ ಡಾ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಬಿರ್ಸಾಮುಂಡ ಜನ್ಮ ದಿನಾಚರಣೆಯ ಅಂಗವಾಗಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಗ್ರಾಪಂ ಅಧ್ಯಕ್ಷೆ ರೂಪ, ಪ್ರೊ.ಚಂದ್ರಮ್ಮ, ತಾಪಂ ಮಾಜಿ ಸದಸ್ಯ ಮಹಾಲಿಂಗ, ಸಮಾಜ ಸೇವಕ ಶ್ರೀಧರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this article