ಬೀದರ್: ಹಿಂದೂ ಧರ್ಮದ ಕೀರ್ತಿ ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವಚೈತನ್ಯವನ್ನೂ ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎರಿಸಿದ ಸ್ವಾಮಿ ವಿವೇಕಾನಂದರು ಇಂದಿನ ಯುವ ಶಕ್ತಿಗೆ ಪ್ರೇರಣೆ ಎಂದು ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ಹೇಳಿದರು.
ಯುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು, ತಮ್ಮೆಲ್ಲ ಬೋಧನೆಗಳಲ್ಲಿ ಯುವಜನತೆ ಮತ್ತು ದೇಶ ಕೇಂದ್ರೀಕರಿಸುತ್ತಿದ್ದರು ಅವರ ಕ್ಷಾತ್ರ, ಆಧ್ಯಾತ್ಮ, ನಿತ್ಯನೂತನವಾದ ಸಂದೇಶ ಆದರ್ಶವಾಗಿಸಿಕೊಳ್ಳಬೇಕೆಂದರು.
ಮುಖ್ಯಗುರುಗಳಾದ ಅರುಣಾ ಬಿರಾದಾರ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತ ಮತ್ತು ಆಧ್ಯಾತ್ಮವನ್ನು ಆಳವಾಗಿ ಅರ್ಥ ಮಾಡಿಕೊಂಡಂತೆಯೇ ಹಿಂದೂ ಸಮಾಜಶಾಸ್ತ್ರವನ್ನೂ ಅರಿತಿದ್ದರು. ಸ್ವಾಮಿ ವಿವೇಕಾನಂದರು ಶಿಥಿಲವಾಗಿದ್ದ ಹಿಂದೂ ಸಮಾಜಕ್ಕೆ ಅದರ ಧರ್ಮವನ್ನು, ಆಧ್ಯಾತ್ಮಿಕ ಕೇಂದ್ರವನ್ನು ಮರಳಿ ತೋರಿಸಿಕೊಟ್ಟವರು ಎಂದರು.ಸೂರ್ಯ ಫೌಂಡೇಶನ್ ಜಿಲ್ಲಾ ಸಂಯೋಜಕ ಗುರುನಾಥ ರಾಜಗೀರಾ ಮಾತನಾಡಿ, ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತರಾಗದೆ ಪಾಠದ ಜೊತೆಗೆ ಆಟದ ಕಡೆಯೂ ಗಮನ ಹರಿಸಬೇಕು, ಈ ನಿಟ್ಟಿನಲ್ಲಿ ಸೂರ್ಯ ಫೌಂಡೇಶನ್ ಜಿಲ್ಲೆಯಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಫೌಂಡೇಶನ್ ಪ್ರಮುಖರಾದ ರಾಜೇಂದ್ರ ಪವಾರ, ಸಿದ್ದು ಕಾಡೋದೆ, ರಮೇಶ ಅರಾಳೆ, ಸಂಗಮೇಶ ದಾನಿ, ಸಂಗಮೇಶ ಬಿರಾದಾರ, ಬಾಲಾಜಿ ಪವಾರ, ಭೀಮರಾವ್ ಪಾಟೀಲ್, ಸಂಜುಕುಮಾರ ಪಾಟೀಲ್ ಹಾಗೂ ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ಇತರರಿದ್ದರು.