ಗಂಗಾವತಿ ಸೇರಿದಂತೆ ಪ್ರಸಿದ್ಧ ಅಂಜನಾದ್ರಿ ಪ್ರದೇಶದಲ್ಲಿ ತಿರುಪತಿ ಮಾದರಿಯಲ್ಲಿ ವಿದ್ಯುತ್ ದೀಪ ಹಾಕಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ಗಂಗಾವತಿ ಸೇರಿದಂತೆ ಪ್ರಸಿದ್ಧ ಅಂಜನಾದ್ರಿ ಪ್ರದೇಶದಲ್ಲಿ ತಿರುಪತಿ ಮಾದರಿಯಲ್ಲಿ ವಿದ್ಯುತ್ ದೀಪ ಹಾಕಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ತಾಲೂಕಿನ ಗಡ್ಡಿ ಗ್ರಾಮದ ಕೆರೆಯಲ್ಲಿ ಗಂಗಾ ಪೂಜೆ ಜೊತೆಗೆ ಬಾಗಿನ ಅರ್ಪಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ, ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಬೇಕು. ಇದರಿಂದ ಎಲ್ಲರಿಗೂ ನೆಮ್ಮದಿ ಸಿಗುತ್ತದೆ ಎಂದ ಅವರು, ತಿರುಪತಿ ಮಾದರಿಯ ವಿದ್ಯುತ್ ಕಂಬಗಳ ತೆರವಿಗೆ ತಹಸೀಲ್ದಾರ್ ಆದೇಶ ನೀಡಿರುವುದರ ಬಗ್ಗೆ ಚರ್ಚೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೆ ಕಂಬಗಳ ತೆರವು ಮಾಡಲು ಅವಕಾಶ ನೀಡುವುದಿಲ್ಲ ಎಂದರು.
ಈ ವಿಷಯದ ಬಗ್ಗೆ ನಗರಸಭೆಯಲ್ಲಿ ಠರಾವು ಆಗಿದೆ. ಅಂಜನಾದ್ರಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕೆಂಬ ಶಪಥ ಮಾಡಿದ್ದೆ. ಅದರಂತೆ ಅಭಿವೃದ್ಧಿಪಡಿಸಿ ರಾಷ್ಟ್ರ ವ್ಯಾಪ್ತಿಯಲ್ಲಿ ಗಮನ ಸಳೆಯುವಂತೆ ಮಾಡುವುದಾಗಿ ತಿಳಿಸಿದರು. ನಾನು ಭಗವಂತನ ಕೆಲಸ ಮಾಡುತ್ತಿದ್ದೇನೆ, ಯಾರಿಗೂ ಹೆದುರುವುದಿಲ್ಲ ಎಂದರು. ಅಂಜನಾದ್ರಿಗೆ ಹೋಗುವ ರಸ್ತೆಯನ್ನು ಆಧ್ಯಾತ್ಮಿಕವಾಗಿ, ಭಕ್ತಿ ಭಾವ ಮೂಡಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.
ವಿದ್ಯುತ್ ಕಂಬಗಳ ತೆರವಿನ ಆದೇಶ ರದ್ದು:
ಗಂಗಾವತಿಯ ಜುಲೈ ನಗರದಿಂದ ರಾಣಾ ಪ್ರತಾಪ್ ವೃತ್ತದ ರಸ್ತೆಯ ಮಧ್ಯದಲ್ಲಿ ಅಳವಡಿಸಲಾಗಿದ್ದ ಧಾರ್ಮಿಕ ಚಿಹ್ನೆವುಳ್ಳ ವಿದ್ಯುತ್ ದೀಪಗಳ ಕಂಬ ತೆರವಿಗೆ ಬುಧವಾರ ಬೆಳಗ್ಗೆ ತಹಸೀಲ್ದಾರ್ ಯು. ನಾಗರಾಜ್ ಆದೇಶಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಅದೇ ದಿನ ಸಂಜೆ ಆದೇಶ ರದ್ದುಪಡಿಸಿದ್ದಾರೆ.ವಿದ್ಯುತ್ ಕಂಬಗಳ ಕುರಿತು ನಗರಸಭೆಯಲ್ಲಿ ಚರ್ಚೆ ಇರುವುದರಿಂದ ಆದೇಶ ವಾಪಸ್ ಪಡೆಯಲಾಗಿದೆ ಎಂದು ತಹಸೀಲ್ದಾರರು ಆದೇಶದಲ್ಲಿ ತಿಳಿಸಿದ್ದಾರೆ.ನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೂ ವಿದ್ಯುತ್ ಕಂಬಗಳ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ಚಿತ್ರ ಅಳವಡಿಸಲಾಗಿದೆ. ಅವುಗಳನ್ನು ತೆರವುಗೊಳಿಸುವಂತೆ ಎಸ್ಡಿಪಿಐ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿ ಮೌಖಿಕ ಆದೇಶ ನೀಡಿದ್ದರಿಂದ ತಹಸೀಲ್ದಾರ ಕಂಬ ತೆರವುಗೊಳಿಸಿ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ.ಆರ್.ಐ.ಡಿ.ಎಲ್) ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ವಿದ್ಯುತ್ ಕಂಬಗಳ ತೆರವಿಗೆ ಆದೇಶ ನೀಡಿದ್ದರಿಂದ ಕೆಲ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.