ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಇಂಜಿನಿಯರ್ಗೆ ಸೂಚನೆ ನೀಡಿದರು.ಜೆಜೆಎಂ ಕಾಮಗಾರಿ ಪರಿಶೀಲನೆಗಾಗಿ ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾರನಗೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣ ಮಾಡುವ ಕಾಮಗಾರಿಗಳ ಅಂತರ್ಗತ ಪೈಪ್ಲೈನ್ ಮತ್ತು ಗೇಟ್ವಾಲ್ವ್ಗಳ ಮಾಹಿತಿಯನ್ನೊಳಗೊಂಡ ವಿಲೇಜ್ ಕೀ ಮ್ಯಾಪನ್ನು ಕಾಮಗಾರಿ ಮುಗಿದ ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು. ವಿಸ್ತೃತ ಯೋಜನಾ ವರದಿಯಲ್ಲಿರುವಂತೆ, ಅಂದಾಜು ಪಟ್ಟಿಯಲ್ಲಿ ನಿಗಧಿಪಡಿಸಿದಂತೆ ಕಾಮಗಾರಿ ಅನುಷ್ಠಾನವಾಗಿರಬೇಕು. ಮನೆ ಮುಂದೆ ಅಳವಡಿಸುವ ನಳ ಸಂಪರ್ಕ ಸೇರಿ ಕಾಮಗಾರಿಗಳಲ್ಲಿ ಬಳಸುವ ಎಲ್ಲ ಸಾಮಗ್ರಿಗಳು ಗುಣಮಟ್ಟದ್ದಾಗಿರಬೇಕು ಎಂದು ಸೂಚನೆ ನೀಡಿದರು.
ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಪರಿಶೀಲಿಸಿ, ಕುಡಿಯುವ ನೀರಿನ ಘಟಕದಲ್ಲಿ ಸ್ವಚ್ಛತೆ ಕಾಪಾಡಬೇಕು. ಸ್ಟ್ಯಾಂಡ್ ಪೋಸ್ಟ್ನ್ನು ನಿಗಧಿತ ಅಳತೆಯಂತೆ ನಿರ್ಮಿಸಿ ಉತ್ತಮ ಗುಣಮಟ್ಟದ ಬಣ್ಣದಲ್ಲಿ ಯೋಜನೆ ಹೆಸರು ಬರೆದಿರಬೇಕು. ಉತ್ತಮ ಸ್ಥಿತಿಯಲ್ಲಿರುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದರು.ನಂತರ ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀನಿ ಕಂಪನಿಗೆ ಭೇಟಿ ನೀಡಿ, ವಿವಿಧ ರೀತಿಯ ಜೀನಿ ಉತ್ಪನ್ನಗಳ ಮಾಹಿತಿ ಪಡೆದರು. ಉತ್ಪನ್ನ ತಯಾರಿಕೆಗೆ ಅಗತ್ಯ ಧಾನ್ಯಗಳನ್ನು ಸ್ಥಳೀಯ ರೈತರಿಂದಲೇ ಖರೀದಿ ಮಾಡಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಜೀನಿ ಮಾಲೀಕರಿಗೆ ಸಲಹೆ ನೀಡಿದರು.ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳ ಪಾಲನೆ- ಪೋಷಣೆಗಾಗಿ ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಟೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕೂಸಿನ ಮನೆಗೆ ಭೇಟಿ ನೀಡಿ, ಮಕ್ಕಳ ಪಾಲನೆ- ಪೋಷಣೆ, ಆಹಾರ ವಿತರಣೆ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ದಾಖಲಾತಿಗಳನ್ನು ಪರಿಶೀಲಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಹರೀಶ್, ಸಹಾಯಕ ನಿರ್ದೇಶಕ (ಗ್ರಾ.ಉ.) ಕನಕಪ್ಪ ಮೇಲುಸಕ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಆರ್.ನಾಗರಾಜು, ಎಚ್. ಆರ್.ಜುಂಜೇಗೌಡ, ತಾಂತ್ರಿಕ ಸಂಯೋಜಕ ಜಿ.ಪುನೀತ್ ಕುಮಾರ್ ಇದ್ದರು.