ಮೇ 5ರಿಂದ 5 ರಿಂದ 17 ರವರೆಗೆ ಒಳ ಮೀಸಲಾತಿ ಸಮೀಕ್ಷೆ

KannadaprabhaNewsNetwork | Published : Apr 24, 2025 12:02 AM

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷೆಯನ್ನು ಜಿಲ್ಲೆಯಲ್ಲಿರುವ ಮತಗಟ್ಟೆಗೆ ಒಬ್ಬರಂತೆ ಗಣತಿದಾರರನ್ನುನೇಮಕ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಕುರಿತಂತೆ ಮೇ 5 ರಿಂದ 17 ರವರೆಗೆ 12 ದಿನಗಳ ಕಾಲ ಜಿಲ್ಲೆಯಾದ್ಯಂತ ಶಿಕ್ಷಕ ಗಣತಿದಾರರ ಮೂಲಕ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದ್ದು ಪರಿಶಿಷ್ಟ ಜಾತಿ ಸಮುದಾಯದವರು ಮಾಹಿತಿ ಹಾಗೂ ವಿವರವನ್ನು ಗಣತಿದಾರರರಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನೆಡೆದ “ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಸಮೀಕ್ಷೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ನೇಮಕವಾಗಿರುವ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿ, ಶೇಖರಿಸುವ ಸಂಬಂಧ ರಾಜ್ಯದಾದ್ಯಂತ ಸಮೀಕ್ಷೆ ನೆಡೆಸಲು ತೀರ್ಮಾನಿಸಿರುತ್ತದೆ.

ಅದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷೆಯನ್ನು ಜಿಲ್ಲೆಯಲ್ಲಿರುವ ಮತಗಟ್ಟೆಗೆ ಒಬ್ಬರಂತೆ ಗಣತಿದಾರರನ್ನುನೇಮಕ ಮಾಡಲಾಗುತ್ತದೆ. ಈ ಗಣತಿದಾರರನ್ನಾಗಿ ಶಿಕ್ಷಕರನ್ನು ಮಾತ್ರವೇ ನೇಮಿಸಲಾಗುತ್ತದೆ. ಆಶಾ, ಅಂಗವಾಡಿ ಕಾರ್ಯಕರ್ತೆಯರನ್ನು ಯಾವುದೇ ಕಾರಣಕ್ಕೂ ನೇಮಕ ಮಾಡಬಾರದು. ಸಮೀಕ್ಷೆಯನ್ನು ಆಂಡ್ರಾಯ್ಡ್ ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿಯೇ ನಮೂದು ಮಾಡಬೇಕಾಗಿರುತ್ತದೆ. ಪ್ರಶ್ನಾವಳಿ ಮೂಲಕ ಮಾಹಿತಿಯನ್ನು ಸವಿಸ್ತಾರವಾಗಿ ಸಂಗ್ರಹಿಸಬೇಕಾಗಿರುತ್ತದೆ.

ಜಿಲ್ಲೆಯ ಮತಗಟ್ಟೆಗಳಲ್ಲಿ ಈಗಾಗಲೆ ಬಿಎಲ್ಓಗಳಾಗಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಅಂತಹ ಶಿಕ್ಷಕರನ್ನು ಈ ಗಣತಿಯ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಬೇಕು. ಯಾವ ಮತಗಟ್ಟೆಯಲ್ಲಿ ಶಿಕ್ಷಕರು ಬಿಎಲ್ಓಗಳಾಗಿ ಕೆಲಸ ಮಾಡುತ್ತಿಲ್ಲವೋ ಅಂತಹ ಕಡೆ ಬೇರೆ ಶಿಕ್ಷಕರನ್ನು ಗಣತಿದಾರರಾಗಿ ನೇಮಕ ಮಾಡಬೇಕು. 10 ಜನ ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕ ಅಧಿಕಾರಿಯನ್ನು ನೇಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಈ ಗಣತಿಯ ಕಾರ್ಯಕ್ಕೆ ನಿಯೋಜನೆ ಆಗುವ ಗಣತಿದಾರರಿಗೆ ತರಬೇತಿ ನೀಡಲು 3 ಅಧಿಕಾರಿಗಳನ್ನು ಮಾಸ್ಟರ್ ತರಬೇತುದಾರರನ್ನು ನೇಮಕ ಮಾಡಲಾಗಿದೆ. ಮೇ 5ರ ಒಳಗಾಗಿ ಸಮುದಾಯದ ಮುಖಂಡರ ಸಭೆ ಮಾಡಿ ಸಮೀಕ್ಷೆಯ ಉದ್ದೇಶದ ಬಗ್ಗೆ ತಿಳಿಸಿಕೊಡಬೇಕು. ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಸಮೀಕ್ಷೆ ಕಾರ್ಯ ಸುಗಮ ಆಗುವ ರೀತಿಯಲ್ಲಿ ಪ್ರಚಾರ ಮಾಡಬೇಕು. ಆಟೋಗಳು ಹಾಗೂ ಕಸ ಸಂಗ್ರಹ ವಾಹನಗಳ ಮೂಲಕ ರೇಡಿಯೋ ಜಿಂಗಲ್ ಗಳನ್ನು ಬಿತ್ತರಿಸಬೇಕು.

ಸಮೀಕ್ಷೆಯಲ್ಲಿ ಶಿಕ್ಷಣದ ಸ್ಥಿತಿಗತಿ, ಉದ್ಯೋಗದ ಮಟ್ಟ, ಆಸ್ತಿ ವಿವರ, ಸಾಮಾಜಿಕ ಸ್ಥಿತಿಗತಿ, ಜಾತಿ ವಿವರ, ಸರ್ಕಾರದ ಸವಲತ್ತು ಪಡೆದಿರುವ ಅಥವಾ ಪಡೆಯದಿರುವ ವಿವರ ಸೇರಿದಂತೆ ಇನ್ನಿತರ ವಿವರವನ್ನು ಸಂಗ್ರಹಿಸಲಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಈ ಕಾರ್ಯಕ್ಕೆ ಬೇಕಾಗಿರುವ ಸಕಲ ಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಿಕೊಂಡು, ನಿಗದಿತ ವೇಳೆಯಲ್ಲಿ ಕಾರಾರುವಕ್ಕಾಗಿ ಸಮೀಕ್ಷೆಯನ್ನು ಕೈಕೊಳ್ಳಲು ಅಧಿಕಾರಿಗಳು ನಿಗಾವಹಿಸಬೇಕು. ಈ ಗಣತಿಯಲ್ಲಿ ಭಾಗವಹಿಸುವ ಗಣತಿದಾರರಿಗೆ ಗೌರವ ಧನವನ್ನು ಸಹ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಥಿಕ್ ಪಾಷ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.ಸಿಕೆಬಿ-6 ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಸಮೀಕ್ಷೆಯ ಪೂರ್ವಸಿದ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿದರು.