ಕೊಪ್ಪಳ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದ ಸಿಟಿ ಆಫ್ ಜಾಯ್ ೨ನೇ ಅಂತಾರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಸೆರೆ ಹಿಡಿದ ಗವಿಸಿದ್ದೇಶ್ವರರ ರಥೋತ್ಸವದ ಚಿತ್ರ ಫೊಟೋ ಟ್ರಾವೆಲ್ ವಿಭಾಗದಲ್ಲಿ ಸಿಟಿ ಆಫ್ ಜಾಯ್ ಬೆಳ್ಳಿ ಪದಕ ಲಭಿಸಿದೆ.
ಇದೇ ಸ್ಪರ್ಧೆಯ ಮೊನೊಕ್ರೋಮ್ (ಕಪ್ಪು-ಬಿಳುಪು) ವಿಭಾಗದಲ್ಲಿ ಅವರ ʻಫ್ರೆಂಡ್ಶಿಪ್ʼ ಶೀರ್ಷಿಕೆಯ ಮತ್ತೊಂದು ಚಿತ್ರ ಸಹ ಸಿಟಿ ಆಫ್ ಜಾಯ್ ಕಂಚಿನ ಪದಕ ಪಡೆದುಕೊಂಡಿದೆ.ಫೊಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ, ಗ್ಲೋಬಲ್ ಫೊಟೋಗ್ರಾಫಿಕ್ ಯೂನಿಯನ್, ಇಂಡಿಯಾ ಇಂಟರ್ನ್ಯಾಷನಲ್ ಗ್ರೂಪ್ ಮತ್ತು ಬೆಂಗಾಲ್ ಫೊಟೋಗ್ರಫಿ ಇನ್ಸ್ಟಿಟ್ಯೂಟ್ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪ್ರಪಂಚದ ೩೦ ದೇಶಗಳ ೧೨೬ ಛಾಯಾಗ್ರಾಹಕರು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಛಾಯಾಗ್ರಾಹಕರಾದ ಎಸ್.ಪಿ. ಮುಖರ್ಜಿ, ಅಭಿಜಿತ್ ಡೇ, ಸುದೀಪ್ ರಾಯ್ ಚೌಧರಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ನವೆಂಬರ್ ೧೫ರ ಬಳಿಕ ಆನ್ಲೈನ್ ಗ್ಯಾಲರಿಯಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಇನ್ಸ್ಟಿಟ್ಯೂಟ್ ಅಧ್ಯಕ್ಷ ಸಂಜಯ್ ಭಟ್ಟಾಚಾರ್ಯ ತಿಳಿಸಿದ್ದಾರೆ.