ನಾಟಕಗಳ ಯಶಸ್ಸಿಗೆ ಸದಭಿರುಚಿಯ ಪ್ರೇಕ್ಷಕರು ಅಗತ್ಯ: ಡಾ. ತಲ್ಲೂರು

KannadaprabhaNewsNetwork |  
Published : Jan 30, 2026, 02:30 AM IST
ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವದಲ್ಲಿ ಕಲಾವಿದ ಸುಂದರ ನಂದ್ಯಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಇಂದು ಇಂಟರ್‌ನೆಟ್‌ನಲ್ಲಿ ಮುಳುಗಿರುವ ಯುವಜನರನ್ನು ನಾಟಕದತ್ತ ಸೆಳೆಯುವುದು ಸುಲಭವಲ್ಲ. ಇದು ಉತ್ತಮ ನಾಟಕಗಳಿಂದ ಮಾತ್ರ ಸಾಧ್ಯ. ಆದರೆ ಈ ಉತ್ತಮ ನಾಟಕಗಳು ಸದಭಿರುಚಿಯ ಪ್ರೇಕ್ಷಕರಿಂದ ಮಾತ್ರ ಯಶಸ್ವಿಯಾಗ ಬಲ್ಲವು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಉಡುಪಿ: ಇಂದು ಇಂಟರ್‌ನೆಟ್‌ನಲ್ಲಿ ಮುಳುಗಿರುವ ಯುವಜನರನ್ನು ನಾಟಕದತ್ತ ಸೆಳೆಯುವುದು ಸುಲಭವಲ್ಲ. ಇದು ಉತ್ತಮ ನಾಟಕಗಳಿಂದ ಮಾತ್ರ ಸಾಧ್ಯ. ಆದರೆ ಈ ಉತ್ತಮ ನಾಟಕಗಳು ಸದಭಿರುಚಿಯ ಪ್ರೇಕ್ಷಕರಿಂದ ಮಾತ್ರ ಯಶಸ್ವಿಯಾಗ ಬಲ್ಲವು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಇಲ್ಲಿನ ಪರ್ಕಳದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಣಿಪಾಲದ ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಅಧ್ಯಕ್ಷ ಜಯರಾಮ ಮಣಿಪಾಲ ಅವರ ಸಾರಥ್ಯದಲ್ಲಿ ಹಮ್ಮಿಕೊಂಡ 3 ದಿನಗಳ ನಾಟಕೋತ್ಸವ ಕಾರ್‍ಯಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಾವಿದ ಜಯರಾಮ ಮಣಿಪಾಲ ಅವರು ತಮ್ಮ ತಂದೆತಾಯಿ ಹೆಸರಲ್ಲಿ ಗುರುವಸಂತಿ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿ ನಾಟಕೋತ್ಸವವನ್ನು ಆಯೋಜಿಸಿ ಸಮಾಜಕ್ಕೆ ತಂದೆ ತಾಯಿಯ ಮಹತ್ವವನ್ನು ಸಾರುತ್ತಿರುವುದು ಅಭಿನಂದನೀಯ ಎಂದರು.

ತಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದಾಗ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಆರಂಭಿಸಿದ್ದು, ಇಂದು 3,500ಕ್ಕೂ ಅಧಿಕ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ರಂಗಭೂಮಿ ಉಡುಪಿ ವತಿಯಿಂದ 2 ವರ್ಷಗಳಿಂದ ರಂಗಶಿಕ್ಷಣವನ್ನು ನೀಡಲಾಗುತ್ತಿದ್ದು, 12 ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ನಡೆದಿದೆ. ಮುಂದೆ ಜಾನಪದವನ್ನು ಕೂಡ ಶಾಲೆಗಳಲ್ಲಿ ಪ್ರಾರಂಭಿಸುವ ಆಶಯ ಇದೆ ಎಂದರು.

ಉದ್ಯಮಿ ರಾಮಮೂರ್ತಿ ಭಟ್, ರೋಟೇರಿಯನ್ ಬಿ. ರಾಜಾರಾಮ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ವಿಠಲ ಶೆಟ್ಟಿಗಾರ್ ಸಗ್ರಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಕಾರ್‍ಯಕ್ರಮದ ರೂವಾರಿ ಜಯರಾಮ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದ ಸುಂದರ ನಂದ್ಯಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್‍ಯಕ್ರಮದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಕರ ಮಣಿಪಾಲ್ ರಚಿಸಿ, ನಟಿಸಿ, ನಿರ್ದೇಶಿಸಿರುವ ‘ಅರ್ಬುದಾ - ಪುಣ್ಯಕೋಟಿ’ ಜಾನಪದ ನಾಟಕದ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ