-ಡಾ. ಪರಮೇಶ್ವರ ಯುವ ಸೈನ್ಯ, ದಸಂಸ ಬೆನಕನಹಳ್ಳಿಯ ಸಾಮಾಜಿಕ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಶಹಾಪುರ
ನರೇಗಾ ಯೋಜನೆಯಡಿ ಶಹಾಪುರ ಮತ್ತು ವಡಗೇರಾದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ನಡೆದ ಕಾಮಗಾರಿಯಲ್ಲಿ ಹೆಚ್ಚಿನ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ ಮತ್ತು ಡಾ. ಪರಮೇಶ್ವರ ಯುವ ಸೇನೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆನಕನಹಳ್ಳಿ ರಸ್ತೆಯಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಸೇತು ಮಾಧವ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ 2021ರಿಂದ 2024-25ನೇ ಸಾಲಿನವರೆಗೆ ನರೇಗಾ ಯೋಜನೆಯಲ್ಲಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕಾಮಗಾರಿಗಳು ಸಮರ್ಪಕವಾಗಿ ಮಾಡದೇ ಬೇಕಾಬಿಟ್ಟಿ ಮಾಡಿ, ಹೆಚ್ಚಿನ ಬಿಲ್ ಪಾವತಿಸಿ ಕೊಂಡಿದ್ದಾರೆ. ಕೆಲ ಅರಣ್ಯ ಅಧಿಕಾರಿಗಳು ಕೂಲಿ ಕೆಲಸ ಮಾಡಿದ ಫಲಾನುಭವಿಗಳಿಗೆ ಕೂಲಿ ನೀಡದೆ ಸತಾಯಿಸಿದ್ದಾರೆ. ಕೂಲಿ ಕಾರ್ಮಿಕರ ಹೆಸರುಗಳಿಗೆ ಕೂಲಿ ಹಣ ಪಾವತಿ ಮಾಡಿ ಹಣ ಲಪಟಾಯಿಸಿದ್ದಾರೆ. ಒಂದೇ ಕೆಲಸ ಅನೇಕ ಬಾರಿ ಮಾಡಿ ಬಿಲ್ ಎತ್ತಿ ಹಾಕಿದ್ದಾರೆ ಎಂದು ಆರೋಪಿಸಿದರು.
ರಸ್ತೆ ಬದಿ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಶಾಲಾವರಣ ಸರ್ಕಾರಿ ಕಟ್ಟಡಗಳಲ್ಲಿ ಹಾಗೂ ಗ್ರಾಮಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ನೆಡಲಾಗಿರುವ ಗಿಡಗಳನ್ನು ಮತ್ತು ಅವುಗಳ ಹೆಸರಿನಿಂದ ಮಾಡಲಾದ ಸಾಮಾಗ್ರಿಗಳ ಖರ್ಚಿನಲ್ಲಿ ಅಪಾರ ಪ್ರಮಾಣದ ಭ್ರಷ್ಟಚಾರ ನಡೆದಿದ್ದು, ಈ ವ್ಯವಹಾರದಲ್ಲಿ ಮೇಲಾಧಿಕಾರಿಗಳ ಪಾಲು ಇದೆ ಎನ್ನುವ ಅನುಮಾನ ಇದೆ. ಅರಣ್ಯ ಉಳಿಸಿ, ಬೆಳೆಸಬೇಕಾದ ಅಧಿಕಾರಿಗಳು ಅರಣ್ಯ ನಾಶಕ್ಕೆ ಮುಂದಾಗಿರುವುದು ದುರಂತ. ಕೂಡಲೇ ಸಮಗ್ರ ತನಿಖೆ ನಡೆಸಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಜಿ.ಪಂ ಸಿಇಒ ಒತ್ತಾಯಿಸಿದ್ದಾರೆ.
ದಲಿತ ಮೈನಾರಿಟಿಸ್ ಸೇನೆಯ ಜಿಲ್ಲಾ ಮುಖಂಡ ಮಹ್ಮದ್ ಇಸ್ಮಾಯಿಲ್ ತಿಮ್ಮಾಪುರಿ, ಭೋಜಪ್ಪ ಮುಂಡಾಸ್, ಅಂಬರೀಶ ಶಿರವಾಳ, ಪ್ರಕಾಶ ದಿಗ್ಗಿ, ಬಸವರಾಜ್ ಚಲುವಾದಿ, ಶಿವು ಚಲುವಾದಿ, ಶಂಕರ್ ಮಂದ್ರಿಕಿ, ಪರಶುರಾಮ್ ದಿಗ್ಗಿ, ಶರಣು ದಿಗ್ಗಿ, ತಿಮ್ಮಣ್ಣ ಗೋಲಗೇರಿ, ವಿಶ್ವರಾಜ ಚಲುವಾದಿ, ಮೌನೇಶ್ ಜಾರಕಿಹೊಳಿ ಇದ್ದರು.-----
ಫೋಟೊ: ಶಹಾಪುರ ಮತ್ತು ವಡಗೇರಾ ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ತನಿಖೆಗೆ ಒತ್ತಾಯಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ, ಡಾ. ಪರಮೇಶ್ವರ ಯುವ ಸೈನ್ಯ ಹಾಗೂ ದಸಂಸ ಯಿಂದ ಬೆನಕನಹಳ್ಳಿಯ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.29ವೈಡಿಆರ್10