ಚಿತ್ರದುರ್ಗ : ಸಚಿವ ಶಿವರಾಜ ತಂಗಡಗಿ ಅವರು ತಮ್ಮ ಬಳಿ ಅನುದಾನ ಬಿಡುಗಡೆ ಮಾಡಲು ಕಮಿಷನ್ ಕೇಳಿದ ಬಗ್ಗೆ ನಿಮ್ಮ ಬಳಿ ಏನಾದರೂ ಸಾಕ್ಷಿ ಇದೆಯಾ, ಇದ್ದರೆ ಬಹಿರಂಗ ಪಡಿಸಿ.
ಗಾಣಿಗ ಸಮಾಜದ ತೈಲೇಶ್ವರ ಸ್ವಾಮಿಜಿಯವರಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾಡಿದ ಒತ್ತಾಯವಿದು. ಸೋಮವಾರ ತಮ್ಮ ಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ಸಚಿವ ಶಿವರಾಜ್ ತಗಂಡಗಿಯವರ ಮೇಲೆ ತೈಲೇಶ್ವರ ಸ್ವಾಮೀಜಿ ಮಾಡಿರುವ ಆರೋಪ ಖಡಾ ಖಂಡಿತವಾಗಿ ನಿರಾಕರಿಸಿದರು. ಇದು ಸತ್ಯಕ್ಕೆ ದೂರವಾದುದೆಂದರು. ಶಿವರಾಜ ತಂಗಡಗಿ ಕಮಿಷನ್ ಮೇಲೆ ಬದುಕುವಂತ ಜನ ಅಲ್ಲ, ಅವರದ್ದೇ ಆದ ಸೈದ್ದಾಂತಿಕ ಹಿನ್ನಲೆಯಲ್ಲಿ ರಾಜಕೀಯ ಜೀವದಲ್ಲಿ ಇದ್ದಾರೆ ಎಂದು ಸಮರ್ಥಿಸಿಕೊಂಡರು.
ಸಚಿವ ಶಿವರಾಜ್ ತಂಗಡಗಿ ಪ್ರಮಾಣಿಕವಾಗಿ ರಾಜಕೀಯ ನಡೆಸುತ್ತಿದ್ದಾರೆ. ಯಾರಿಂದಲೂ ಹಣ ಪಡೆದಿಲ್ಲ. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ರಾಜಕೀಯದಿಂದ ಹಣ ಮಾಡುವ ಉದ್ದೇಶ ಅವರಲ್ಲಿ ಇಲ್ಲ. ತಮ್ಮ ಜೀವನದಲ್ಲಿ ಕಾಯಕ ಪ್ರವೃತ್ತಿಯನ್ನು ರೂಢಿಸಿಕೊಂಡವರು. ತಮ್ಮಲ್ಲಿ ಇದ್ದುದ ಬೇರೆಯವರೊಂದಿಗೆ ಹಂಚಿಕೊಂಡು ಊಟ ಮಾಡುವವರಾಗಿದ್ದಾರೆ ಎಂದರು.
ಸರ್ಕಾರದಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಬೇಕಾದರೂ ಅದಕ್ಕೆ ತನ್ನದೆ ಆದ ನಿಯಮಗಳು ಇದ್ದು ಪಾಲಿಸಬೇಕಿದೆ. ಸರ್ಕಾರದಿಂದ ಒಂದು ಕೋಟಿಗಿಂತ ಕಡಿಮೆ ಇದ್ದರೆ ಅನುದಾನ ಬಿಡುಗಡೆಯಾಗುವುದಿದ್ದರೆ ಸಚಿವರೇ ಸಮ್ಮತಿಸುತ್ತಾರೆ. ಒಂದು ಕೋಟಿಗಿಂತ ಜಾಸ್ತಿಯಾದರೆ ಆ ಫೈಲು ಮುಖ್ಯಮಂತ್ರಿ ಬಳಿ ಹೋಗುತ್ತದೆ. ಅವರು ಪರಿಶೀಲಿಸಿದ ನಂತರ ಹಣಕಾಸು ಇಲಾಖೆಗೆ ಬಂದು ಅಲ್ಲಿ ಅನುಮೋದನೆ ಪಡೆದ ನಂತರ ಹಣ ಬಿಡುಗಡೆಯಾಗುತ್ತದೆ ಎಂದರು.
ಈ ಗಾಣಿಗ ಸಮುದಾಯದಲ್ಲಿ ಸ್ವಾಮಿಜಿ ಗಳಾದವರು ತಮ್ಮ ಪೂರ್ವಾಶ್ರಮದಲ್ಲಿ ರಾಜಕೀಯದಲ್ಲಿ ಇದ್ದವರು ಹಾಗೂ ಸಚಿವರಾಗಿ ಅನುಭವ ಹೊಂದಿದ್ದಾರೆ. ಅವರಿಗೆ ಸರ್ಕಾರದಿಂದ ಹಣ ಹೇಗೆ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಇದೆ. ಒಂದು ಸರ್ಕಾರ ಯಾವುದಕ್ಕಾದರೂ ಅನುದಾನ ನೀಡುತ್ತೇವೆ ಎಂದು ತಿಳಿಸಿದ್ದರೆ ಹಾಗೂ ಆ ಸರ್ಕಾರ ಅಧಿಕಾರ ಕಳೆದುಕೊಂಡರೆ ಹಿಂದಿನ ಸರ್ಕಾರದ ಅನುದಾನ ಬಿಡುಗಡೆಯಾಗುವುದು ಕಷ್ಠದ ಕೆಲಸವಾಗಿದೆ ಎಂದು ಶ್ರೀಗಳು ಹೇಳಿದರು.
ತಗಂಡಗಿಯವರು ಕಟ್ಟ ಕಡೆಯ ಸಮುದಾಯಕ್ಕೂ ಸರ್ಕಾರದ ಸೌಲಭ್ಯ ಸಿಗಬೇಕು ಎನ್ನುವವರಾಗಿದ್ದಾರೆ. ಕಮಿಷನ್ ಆಸೆ ಹೊಂದಿಲ್ಲ. ಪ್ರತಿ ಸಮುದಾಯದ ಹಿತವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಗಾಣಿಗ ಸಮಾಜದ ತೈಲೇಶ್ವರ ಸ್ವಾಮಿಜಿಯವರು ಮಾಡಿರುವ ಆರೋಪ ಸಾಕ್ಷಿಗಳು ಬೇಕು. ಅನಗತ್ಯ ಆರೋಪ ಸರಿಯಲ್ಲ. ವಿನಾಕಾರಣ ಸ್ವಚ್ಚ ರಾಜಕಾರಣಿ ವಿರುದ್ಧ ಆರೋಪ ಸರಿಯಲ್ಲ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ಗೌನಹಳ್ಳಿ ಗೋವಿಂದಪ್ಪ, ಎಚ್.ಲಕ್ಷ್ಮಣ್, ಎಸ್ಜೆಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ಕಾಳಘಟ್ಟದ ಹನುಮಂತಪ್ಪ, ಚಳ್ಳಕೆರೆ ತಾಲೂಕು ಭೋವಿ ಸಮಾಜದ ಅಧ್ಯಕ್ಷ ಹೆಚ್.ಅಂಜನೇಯ, ನಿರ್ದೇಶಕ ಈರಣ್ಣ ಇದ್ದರು.