ಕನ್ನಡಪ್ರಭ ವಾರ್ತೆ ಹನೂರು
ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಐದು ಭರವಸೆಗಳನ್ನುನೀಡಿತ್ತು. ಅದರಂತೆ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಐದು ಭರವಸೆಗಳನ್ನು ಈಡೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಮಾಜಿ ಶಾಸಕ ನರೇಂದ್ರ ತಿಳಿಸಿದರು.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಗ್ಯಂ, ಮೀಣ್ಯಂ, ಗಾಜನೂರು, ಕೊಪ್ಪ ಗ್ರಾಮಗಳಲ್ಲಿ ಮಾಜಿ ಶಾಸಕ ನರೇಂದ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಪರ ಮತಯಾಚಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ತಾವು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದೆ. ಈ ಚುನಾವಣೆಗೆ ಗ್ಯಾರೆಂಟಿ ಕಾರ್ಡ್ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ರೈತರ ಸಾಲ ಮನ್ನಾ, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಹೆಚ್ಚಳ, ಪ್ರತಿ ಬಡ ಮಹಿಳೆಯ ಖಾತೆಗೆ ಒಂದು ಲಕ್ಷ ರು. ಧನ ಸಹಾಯ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಗ್ಯಾರಂಟಿ, ಒಂದು ಲಕ್ಷ ರು.ಗಳ ಉದ್ಯೋಗ ಪ್ರೋತ್ಸಾಹ ಧನ, ಮನರೇಗಾ ಯೋಜನೆಯಡಿ ಪ್ರತಿ ಕೂಲಿ ಕಾರ್ಮಿಕರಿಗೆ 400 ರು.ಗಳ ಕೂಲಿ ಹಣ ನೀಡಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದ್ದು ಈ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದರೆ ನೀಡಲಾಗುವುದು. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಸುನಿಲ್ ಬೊಸ್ ಅವರಿಗೆ ಅಧಿಕ ಮತಗಳನ್ನು ನೀಡುವ ಮೂಲಕ ಅವರ ಗೆಲುವಿಗಾಗಿ ಶ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ಹಲವು ಮುಖಂಡರು ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಮುಖಂಡರಾದ ರವಿ, ಮಾದೇಶ್, ನಟರಾಜು, ಅಂಕಶೆಟ್ಟಿ, ಒಂಟಿಗೌಡ, ಕೂಡ್ಲೂರು ಬಸವರಾಜು, ಜಗನಾಥ್ , ಎಲ್ಲಪ್ಪ, ಪೆದ್ದನಪಾಳ್ಯ ಮಣಿ, ನಾಗರಾಜು,ಮೀಣ್ಯಂ ಪ್ರಭು ಮಾರಿಮುತ್ತು ಹಾಗೂ ಇನ್ನಿತರರು ಹಾಜರಿದ್ದರು.