ಕನ್ನಡಪ್ರಭ ವಾರ್ತೆ ಶಿರಸಿ
ಮಠದಲ್ಲಿ ಬೇಡ್ತಿ-ಅಘನಾಶಿನಿ ನದಿತಿರುವು ಯೋಜನೆ ವಿರೋಧಿಸಿ ನಡೆದ ವಿಶೇಷ ಸಭೆಯಲ್ಲಿ ಚಳವಳಿ ತೀವ್ರಗೊಳಿಸುವ ಪ್ರಸ್ತಾಪ ವ್ಯಕ್ತವಾದವು. ಇದರ ಬೆನ್ನಲ್ಲೆ ತಮ್ಮ ನಿಲುವು ವಿವರಿಸಿದ ಶ್ರೀಗಳು, ಸಮರೋಪಾದಿಯಲ್ಲಿ ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಿದೆ. ಮುಖ್ಯವಾಗಿ ಕರಾವಳಿ ಭಾಗದ ಜನರು ಸಂಪೂರ್ಣ ಕೈಜೋಡಿಸಿಕೊಂಡು ಇದನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬೆಂಗಳೂರಿನಲ್ಲಿ ಎನ್ ಡಬ್ಲ್ಯೂಡಿಎ ವಿಜ್ಞಾನಿಗಳೊಂದಿಗೆ ನಡೆದ ಚರ್ಚೆಯಲ್ಲಿ ನಮ್ಮ ನಿಯೋಗದಲ್ಲಿದ್ದ ತಜ್ಞರು ಮಂಡಿಸಿದ ಪ್ರಶ್ನೆಗಳಿಗೆ ಸಂಸ್ಥೆಯ ವಿಜ್ಞಾನಿಗಳು ನಿರುತ್ತರರಾದರು ಎಂದರು. ಕರಾವಳಿ ಭಾಗದಲ್ಲಿ ಜನಜಾಗೃತಿ ಕೈಗೊಂಡ ಪ್ರಮುಖರಾದ ವಿಶ್ವನಾಥ ಶೀಗೆಹಳ್ಳಿ ಮತ್ತು ಪ್ರಮೋದ್ ವೈದ್ಯ ಮತ್ತಿಘಟ್ಟ ಮಾತನಾಡಿ, ಕರಾವಳಿ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದು, ಉತ್ತಮ ಬೆಂಬಲದ ವಿಶ್ವಾಸ ವ್ಯಕ್ತಪಡಿಸಿದರು.ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಹಿರಿಯ ಸಹಕಾರಿ ಎನ್ .ವಿ. ಹೆಗಡೆ ಮುತ್ತಿಗೆ, ಜಿ.ಆರ್. ಹೆಗಡೆ ಬೆಳ್ಳೆಕೆರಿ, ಶಿವಾನಂದ ಕಳವೆ, ಎಂ.ಕೆ. ಭಟ್ ಯಡ್ಹಳ್ಳಿ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ, ಜಿ.ಎನ್. ಹೆಗಡೆ ಕಣ್ಣಿಮನೆ ತಮ್ಮ ಅಭಿಪ್ರಾಯ ಮಂಡಿಸಿದರು. ಸುರೇಶ ಹಕ್ಕಿಮನೆ ಸ್ವಾಗತಿಸಿದರು. ಅನಂತ ಭಟ್ ಹುಳಗೋಳ ವಂದಿಸಿದರು.