ಕಾರ್ಕಳ ತಾಲೂಕಿನ ಮುಜಿಲ್ನಾಯ ದೈವಸ್ಥಾನದಲ್ಲಿ ಬೊಳ್ಳೊಟ್ಟು ಬ್ರಹ್ಮ ಮುಜಿಲ್ನಾಯ ದೈವಸ್ಥಾನ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಯಾವುದೇ ದೈವಸ್ಥಾನಗಳಲ್ಲಿ ಕಾರ್ಣಿಕ ಉಳಿಯಬೇಕಾದರೆ ಅನಾದಿ ಕಾಲದಿಂದಲೂ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕಟ್ಟು ಕಟ್ಟಲೆ ರೀತಿ ರಿವಾಜುಗಳಿಗೆ ಸ್ವಲ್ಪವೂ ಚ್ಯುತಿಯಾಗದಂತೆ ಕಾಪಾಡಿಕೊಂಡು ಬರಬೇಕಾಗುತ್ತದೆ. ಬದಲಾಗಿ ಮೂಲ ವಿಚಾರವನ್ನು ಮರೆತು ತಮ್ಮ ಆಡಂಬರದ ಪ್ರಚಾರಕ್ಕಾಗಿ ಮಾರ್ಪಡುಗಳನ್ನು ಮಾಡುವುದು ಸರಿಯಲ್ಲ ಎಂದು ಡಾ.ರವೀಶ್ ಪಡುಮಲೆ ಹೇಳಿದರು.
ಅವರು ಕಾರ್ಕಳ ತಾಲೂಕಿನ ಮುಜಿಲ್ನಾಯ ದೈವಸ್ಥಾನದಲ್ಲಿ ಬೊಳ್ಳೊಟ್ಟು ಬ್ರಹ್ಮ ಮುಜಿಲ್ನಾಯ ದೈವಸ್ಥಾನ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ದೈವಸ್ಥಾನಗಳು ಭಕ್ತಿ ಶ್ರದ್ಧೆಯ ಕೇಂದ್ರಗಳಾಗಬೇಕು ವಿನಃ ಆಡಂಬರದ ಕೇಂದ್ರವಾಗಬಾರದು. ಈದು ನಾಡಿನಲ್ಲಿ ಇಂದಿಗೂ ಅನಾದಿ ಕಾಲದ ಕಟ್ಟು ಕಟ್ಟಲೆಗಳು ಜೀವಂತವಾಗಿರುವುದರಿಂದಲೇ ತುಳುನಾಡಿನಲ್ಲಿ ಅತ್ಯಂತ ಕಾರಣೀಕ ಕ್ಷೇತ್ರವಾಗಿ ಉಳಿದಿದ್ದು, ಇಲ್ಲಿಯ ದರ್ಶನ ಮಾಡಿದಾಗ ಮೈ ರೋಮಾಂಚನಗೊಳ್ಳುತ್ತದೆಂದು ತಿಳಿಸಿದರು.ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಮಾತನಾಡಿ, ಈದು ಗ್ರಾಮಸ್ಥರು ಹಿಂದಿನಿಂದಲೂ ಧಾರ್ಮಿಕ ಚಟುವಟಿಕೆಗಳಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಾ ಬಂದವರು. ಹಾಗಾಗಿ ಬೊಳ್ಳೊಟ್ಟು ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ವಸಂತ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್, ಉದ್ಯಮಿ ಪ್ರೇಮ್ ಕುಮಾರ್, ಅರ್ಚಕರಾದ ಕೃಷ್ಣ ತಂತ್ರಿಯವರು ಉಪಸ್ಥಿತರಿದ್ದರು. ರಾಜು ಪೂಜಾರಿ ಪ್ರಾರ್ಥನೆ ನೆರವೇರಿಸಿದರು. ಪ್ರಶಾಂತ್ ಚಿತ್ತಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಗೌಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.