ಹೋರಾಟಕ್ಕೆ ಮಠಾಧೀಶರು, ಚಿತ್ರರಂಗದ ನಟರು, ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿ ರಾಷ್ಟ್ರೀಯ ಅಂದೋಲನವಾಗಿ ಮಾಡಿದರೂ ಸಹ ಕೇಂದ್ರ ಸರ್ಕಾರ ರಾಜಕಾರಣಿ ಹಾಗೂ ಗೋವಾದ ಮಾತು ಕೇಳಿಕೊಂಡು ಯೋಜನೆ ಜಾರಿ ಮಾಡದಿರುವುದು ರೈತರಿಗೆ ಮಾಡಿದ ದ್ರೋಹ
ನರಗುಂದ: ಕಳೆದ 10 ವರ್ಷದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನರಗುಂದ ಬಂಡಾಯ ನೆಲದಲ್ಲಿ ಕುಡಿಯುವ ನೀರಿಗಾಗಿ ಹೋರಾಟ ಮಾಡಿದರೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಸರ್ಕಾರ ಜಾರಿ ಮಾಡದಿರುವುದು ಖಂಡನೀಯ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಉತ್ತರ ಕರ್ನಾಟಕ ಭಾಗದ ಬಂಡಾಯ ನೆಲದಲ್ಲಿ ಕಳೆದ 10 ವರ್ಷಗಳಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಜಿಲ್ಲೆಯ ಹನ್ನೊಂದು ತಾಲೂಕಿನ ರೈತರು ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಿ ಈ ಭಾಗದ ರೈತರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ವಿವಿಧ ರೀತಿಯ ಹೋರಾಟ ಮಾಡಿದ್ದೇವೆ. ಮೇಲಾಗಿ ಹೋರಾಟಕ್ಕೆ ಮಠಾಧೀಶರು, ಚಿತ್ರರಂಗದ ನಟರು, ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿ ರಾಷ್ಟ್ರೀಯ ಅಂದೋಲನವಾಗಿ ಮಾಡಿದರೂ ಸಹ ಕೇಂದ್ರ ಸರ್ಕಾರ ರಾಜಕಾರಣಿ ಹಾಗೂ ಗೋವಾದ ಮಾತು ಕೇಳಿಕೊಂಡು ಯೋಜನೆ ಜಾರಿ ಮಾಡದಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಆರೋಪಿಸಿದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ಕೋಟಿ ಅನುದಾನದಲ್ಲಿ ನೀರು ಪೂರೈಕೆ ಮಾಡುವ ಕಾಲುವೆಯನ್ನು ಗುತ್ತಿಗೆದಾರರು ಕಳೆಪ ಕಾಮಗಾರಿ ಮಾಡಿದ್ದಕ್ಕೆ ಹೋರಾಟ ಮಾಡಿದರಿಂದ ಕೋರ್ಟ ಕಾಮಗಾರಿ ತನಿಖೆ ಮಾಡುವಂತೆ ಹೇಳಿದ್ದರಿಂದ ತನಿಖೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಮಲ್ಲಣ್ಣ ಓಲೇಕಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ಹನಮಂತ ಸರನಾಯ್ಕರ, ಮಲ್ಲೇಶ ಅಣ್ಣಿಗೇರಿ, ಶಂಕ್ರಪ್ಪ ಜಾಧವ, ಫಕೀರಪ್ಪ ಅಣ್ಣಿಗೇರಿ, ಅರ್ಜುನ ಮಾನೆ, ಶಿವಪ್ಪ ಸಾತಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಯಲ್ಲಪ್ಪ ಚಲವಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.