ನಶೆಗೆ ಯುವಜನತೆ ಬಲಿ ವಿಷಾದನೀಯ

KannadaprabhaNewsNetwork | Published : Jun 27, 2025 12:48 AM

ವಿದ್ಯಾರ್ಥಿಗಳು ತಂದೆ- ತಾಯಿ, ಗುರುಗಳನ್ನು ಗೌರವಿಸಿ ಅವರಿಗೆ ಶರಣಾಗಿ ವಿದ್ಯಾಭ್ಯಾಸ ಮಾಡಬೇಕು. ಆದರೆ, ಇಂದು ಹೆಚ್ಚಿನ ಯುವಜನತೆ ನಶೆಗೆ ಬಲಿಯಾತ್ತಿರುವುದು ವಿಷಾದನೀಯ ಎಂದು ಪಟ್ಟಣದ ಆರಕ್ಷಕ ಠಾಣೆ ಉಪನಿರೀಕ್ಷಕ ಹಾರೂನ್ ಅಖ್ತರ್ ಹೇಳಿದ್ದಾರೆ.

- ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಹಾರೂನ್‌ ಅಖ್ತರ್

- - -

ಮಲೇಬೆನ್ನೂರು: ವಿದ್ಯಾರ್ಥಿಗಳು ತಂದೆ- ತಾಯಿ, ಗುರುಗಳನ್ನು ಗೌರವಿಸಿ ಅವರಿಗೆ ಶರಣಾಗಿ ವಿದ್ಯಾಭ್ಯಾಸ ಮಾಡಬೇಕು. ಆದರೆ, ಇಂದು ಹೆಚ್ಚಿನ ಯುವಜನತೆ ನಶೆಗೆ ಬಲಿಯಾತ್ತಿರುವುದು ವಿಷಾದನೀಯ ಎಂದು ಪಟ್ಟಣದ ಆರಕ್ಷಕ ಠಾಣೆ ಉಪನಿರೀಕ್ಷಕ ಹಾರೂನ್ ಅಖ್ತರ್ ಹೇಳಿದರು.

ಪಟ್ಟಣದ ಬೀರಲಿಂಗೆಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಜೂನ್ ಮಾಹೆಯಲ್ಲಿ ಪೂರ್ಣ ಶಾಲಾ- ಕಾಲೇಜುಗಳಲ್ಲಿ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಾವುದೇ ನಶೆ ಮಿಶ್ರಿತ ಚಾಕೋಲೇಟ್, ಪಾನೀಯ ಮತ್ತಿತರೆ ಮಾದಕ ಪದಾರ್ಥಗಳಿಗೆ ಬಲಿಯಾದರೆ ಜೀವನವನ್ನೇ ನಾಶ ಮಾಡಿಕೊಂಡಂತೆ ಎಂದು ಎಚ್ಚರಿಸಿದರು.

ಕಸಾಪ ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಬರ್ಮಾ, ಥೈಲ್ಯಾಂಡ್, ಆಫ್ಘಾನಿಸ್ಥಾನ, ನೇಪಾಳ, ನೈಜೀರಿಯಾ ದೇಶಗಳು ಭಾರತವನ್ನು ವೀಕ್ ಮಾಡಲು ಮಾದಕ ಪದಾರ್ಥಗಳನ್ನು ಸರಬರಾಜು ಮಾಡುತ್ತಿವೆ. ಯುವಜನತೆ ಜಾಗೃತರಾಗಬೇಕಿದೆ ಎಂದರು.

ಪಿಯು ಕಾಲೇಜು ಪ್ರಾಚಾರ್ಯ ಎಸ್. ಹನುಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿರು. ಡ್ರಗ್, ಮದ್ಯಪಾನ ಕುರಿತು ಏರ್ಪಡಿಸಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಂಜು, ಮೌನ ಪಾಟೀಲ್, ಚಂದನಾ, ಕವನ, ಮಮತಾ, ಸೃಷ್ಠಿ ಅವರಿಗೆ ಬಹುಮಾನ ವಿತರಿಸಲಾಯಿತು. ಲಾವಣ್ಯ, ಸಿಂಚನ ಅವರ ಬಂಜಾರರ ವೇಷ ಎಲ್ಲರ ಮೆಚ್ಚುಗೆ ಗಳಿಸಿತು. ವಿದ್ಯಾರ್ಥಿನಿಯರಿಂದ ರಸ್ತೆ ಸಂಚಾರ, ಮಾದಕ ದ್ರವ್ಯ, ಮದ್ಯಪಾನ ಕುರಿತ ರೂಪಕಗಳು, ನಾಟಕಗಳನ್ನು ಅಭಿನಯಿಸಿದರು.

ಉಪನ್ಯಾಸಕರಾದ ಶಂಭುಲಿಂಗಪ್ಪ, ಶೇಖರಪ್ಪ, ಅಂಜನಪ್ಪ, ರಮೇಶ್, ಜ್ಯೋತಿ, ಎಎಸ್‌ಐ ಶ್ರೀನಿವಾಸ್, ಪೇದೆಗಳಾದ ರಾಜಪ್ಪ, ಪ್ರದೀಪ್, ಶಿವಕುಮಾರ್ ಹಾಗೂ ಪೋಷಕರು ಹಾಜರಿದ್ದರು.

- - -

-ಚಿತ್ರ-೧: ಸಮಾರಂಭದಲ್ಲಿ ಪಿಎಸ್‌ಐ ಹಾರೂನ್ ಅಖ್ತರ್ ಮಾತನಾಡಿದರು.