ಮಂಗಳೂರು: ಕೇಂದ್ರ ಸರ್ಕಾರ ಜಿಎಸ್ಟಿ ತೆರಿಗೆ ಕಡಿತಗೊಳಿಸಿರುವುದು ಜನತೆಗೆ ದೀಪಾವಳಿ ಗಿಫ್ಟ್ ಎಂದು ಕರಪತ್ರ ಮುದ್ರಿಸಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಅಂಚೆ ಮೂಲಕ ಎಲ್ಲರ ಮನೆಗಳಿಗೆ ಕಳುಹಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ದುಬಾರಿ ಸ್ಲ್ಯಾಬ್ಗಳಲ್ಲಿ ಜಿಎಸ್ಟಿ ವಸೂಲಿ ಮಾಡುತ್ತಿದ್ದರೂ ತುಟಿ ಪಿಟಿಕ್ ಎನ್ನದ ಬಿಜೆಪಿ ಶಾಸಕರು ಹಾಗೂ ಸಂಸದರು ಈಗ ಮಾತ್ರ ದೀಪಾವಳಿ ಗಿಫ್ಟ್ ಎನ್ನುತ್ತಿರುವುದು ನಾಚಿಕೆಗೇಡು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ. ಎಂಎಲ್ಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರ ಬದಲು ಎಂಟು ವರ್ಷಗಳಲ್ಲಿ ವಸೂಲಿ ಮಾಡಿದ ಜಿಎಸ್ಟಿ ಮೊತ್ತ ಎಷ್ಟು, ಯಾವುದಕ್ಕೆಲ್ಲ ಖರ್ಚು ಮಾಡಲಾಗಿದೆ? ಈ ವೇಳೆ ರಾಜ್ಯಕ್ಕೆ ನೀಡಿದ ಯೋಜನೆ ಏನು ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಈವರೆಗೆ ರಾಜ್ಯ ಸರ್ಕಾರ ಪಾವತಿ ಮಾಡಿದ ಜಿಎಸ್ಟಿ ಬಗ್ಗೆ ವಿವರ ನೀಡಬೇಕು ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ಭಾಸ್ಕರ ರಾವ್, ನಾಗೇಂದ್ರ ಮತ್ತಿತರರಿದ್ದರು.