ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡ ಗ್ರಾಮದ ಭಕ್ತರು, ಭಾನುವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಭಾನುವಾರ ಸಂಭ್ರಮದ ಉತ್ಸವಕ್ಕೆ ತೆರೆ ಬಿತ್ತು.
ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ಗ್ರಾಮಸ್ಥರು, ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚಿನ್ನತಪ್ಪ ಉತ್ಸವದ ಪಟ್ಟಣಿಹಬ್ಬ ಶನಿವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಉತ್ಸವಕ್ಕೆ ಆಗಮಿಸಿ ಶ್ರೀಕೃಷ್ಣನ ಕೊಳಲಿನ ನಾದವನ್ನು ಆಲಿಸಿ ದೇವಾಲಯದಲ್ಲಿ ಹರಕೆ, ಪೂಜೆ ಸಲ್ಲಿಸಿದರು.ಚಿನ್ನತಪ್ಪ ದೇವರ ವಾರ್ಷಿಕ ಉತ್ಸವ ಶುಕ್ರವಾರ ಮುಂಜಾನೆ ಅನುರಾಧ ನಕ್ಷತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಪ್ರಾರಂಭಗೊಂಡಿತು. ಶನಿವಾರ ಮಧ್ಯಾಹ್ನ ದೇವಾಲಯದಿಂದ ಶ್ರೀ ಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಯಿತು.
ಶ್ವೇತ ವಸ್ತ್ರಧರಿಸಿದ ಮಹಿಳೆಯರು ಚೆಂಬುಚೆರ್ಕ್ ಹೊತ್ತು ಊರಮಂದ್ನಲ್ಲಿ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡರು. ಪ್ರತಿ ವರ್ಷದಂತೆ ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು.
ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.ದೇವ ತಕ್ಕರು ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಬಿದ್ಧಿಯಂಡ ಶುಭಾಷ್, ಕಾರ್ಯದರ್ಶಿ ತೊತ್ತಿಯoಡ ಜೀವನ್, ಖಜಾಂಚಿ ಆಚೀರ ಲವ, 14 ಕುಲದ ತಕ್ಕ ಮುಖ್ಯಸ್ಥರು, ಉತ್ಸವ ಸಮಿತಿ ಸದಸ್ಯರು ಹಾಗೂ ಗೊಲ್ಲಜನಾಂಗ ಬಾಂಧವರೊಂದಿಗೆ ಊರ ಹಾಗೂ ಪರ ಊರಿನ ಭಕ್ತರು ಇದ್ದರು.