ತಾಯಿಯ ಆಸೆ ತೀರಿಸಲು ಕೃಷ್ಣ ಮಠಕ್ಕೆ ಬಂದ ಜ್ಯೂ.ಎನ್‌ಟಿಆರ್!

KannadaprabhaNewsNetwork | Published : Sep 1, 2024 1:50 AM

ತೆಲುಗು ನಟ ಜ್ಯೂನಿಯರ್ ಎನ್‌ಟಿಆರ್, ತಾಯಿ ಜೊತೆ ಶನಿವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರೊಂದಿಗೆ ಉಡುಪಿಯವರೇ ಆದ ಕನ್ನಡದ ಖ್ಯಾತ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಇದ್ದರು.

ಕನ್ನಡಪ್ರಭ ವಾರ್ತೆ ಉಡುಪಿತಾಯಿಯ ಆಸೆ ಈಡೇರಿಸುವುದಕ್ಕಾಗಿ ಖ್ಯಾತ ತೆಲುಗು ನಟ ಜ್ಯೂನಿಯರ್ ಎನ್‌ಟಿಆರ್, ತಾಯಿ ಜೊತೆ ಶನಿವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರೊಂದಿಗೆ ಉಡುಪಿಯವರೇ ಆದ ಕನ್ನಡದ ಖ್ಯಾತ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಇದ್ದರು.ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ ಮೂವರು ದಿಗ್ಗಜರು, ಶ್ರೀಗಳ ಕೋಟಿ ಗೀತಾ ಲೇಖನ ಅಭಿಯಾನದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶ್ರೀಗಳು ಅವರಿಗೆ ಗೀತಾ ಸ್ಮರಣಿಕೆ ನೀಡಿ ಗೌರವಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಟಿಆರ್, ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು, ಅವರಿಗೆ ಸುಮಾರು 40 ವರ್ಷದಿಂದ ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಒಂದು ಆಸೆ ಇತ್ತು, ಈ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಅಮ್ಮನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ ಎಂದರು.ಕೃಷ್ಣಮಠಕ್ಕೆ ಭೇಟಿ ಕೊಟ್ಟು ಮನಃಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದ ಅವರು, ನಾನೂ ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ ಎಂದರು.ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ಅವರ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು, ಅವರಿಗೆ ರಿಷಬ್‌ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿ, ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದರು.

ನಟ ರಿಷಬ್ ಶೆಟ್ಟಿ ಮಾತನಾಡಿ, ನನಗೆ ಜೂ. ಎನ್‌ಟಿಆರ್ ಆಂಧ್ರಪ್ರದೇಶದವರು ಎಂಬ ಭಾವನೆ ಬರುವುದಿಲ್ಲ. ಅವರ ಜೊತೆ ಅಣ್ಣ ತಮ್ಮನ ಸಂಬಂಧ ಫೀಲ್ ಆಗುತ್ತದೆ ಎಂದರು. ಇತ್ತೀಚೆಗೆ ಉಡುಪಿ ಮಠಕ್ಕೆ ಬರಬೇಕು ಎಂದು ಹೇಳಿಕೊಂಡಿದ್ದರು. ಇವತ್ತು ಬಂದಿದ್ದಾರೆ, ನಾನು ಈ ಕಡೆಗೆ ಇದ್ದೆ ಹಾಗಾಗಿ ಅವರ ಜೊತೆಗೆ ಮಠಕ್ಕೆ ಬಂದೆ. ಕಾಂತಾರ ಸಿನಿಮಾದ ಪ್ರೀಕ್ವೆಲ್ ಚಿತ್ರೀಕರಣ ಆಗುತ್ತಿದೆ ಎಂದರು.