- ಸೊಕ್ಕೆ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮ ಕಾರ್ಯಕ್ರಮ - - -
- ಮುಂದಿನ ವರ್ಷ ಸಾಯಿ ಬಾಬಾ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣವಾಗಲಿ- - - ಕನ್ನಡಪ್ರಭ ವಾರ್ತೆ ಜಗಳೂರು
ಮುಂದಿನ ವರ್ಷ ನಡೆಯುವ ಗುರುಪೂರ್ಣಿಮದಲ್ಲಿ ಶಾಸಕರು ಸೇರಿದಂತೆ ಎಲ್ಲರ ಸಹಕಾರದಿಂದ ಸೊಕ್ಕೆ ಗ್ರಾಮದಲ್ಲಿ ಸಾಯಿ ಬಾಬಾ ಹೆಸರಿನಲ್ಲಿ ಕಲ್ಯಾಣ ಮಂಟಪಕ್ಕೆ ಶಂಕುಸ್ಥಾಪನೆ ನಡೆಯಬೇಕು. ಆ ಮೂಲಕ ಬಡವರ ಕಲ್ಯಾಣ ಕಾರ್ಯಕ್ರಮಗಳು ಜರುಗುವಂತಾಗಲಿ ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ನುಡಿದರು.ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಪ್ರೊ.ತಿಪ್ಪೇಸ್ವಾಮಿ ನಿರ್ಮಾಣ ಮಾಡಿರುವ ಶಿರಡಿ ಶ್ರೀ ಸತ್ಯ ಸಾಯಿಬಾಬಾ ದೇವಸ್ಥಾನದಲ್ಲಿ ಭಾನುವಾರ ಗುರುಪೂರ್ಣಿಮ ಹಿನ್ನೆಲೆ ಗಣಹೋಮ, ಅನ್ನದಾನದ ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸ್ವಾಮೀಜಿ ಮಾತನಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆರಾಧ್ಯ ಗುರು, ನೊಣವಿನಕೆರೆ ಅಜ್ಜಯ್ಯ ಎಂದೇ ಹೆಸರಾಗಿರುವ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಆರಾಧ್ಯ ದೈವವಾಗಿದ್ದಾರೆ. ಹರ ಮುನಿದರೂ ಗುರು ಕಾಯುತ್ತಾನೆ ಎಂಬಂತೆ ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುವುದು ಗುರುವಿನ ಅನುಗ್ರಹವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ತಿಪ್ಪೇಸ್ವಾಮಿ, ದಿಶಾ ಕಮಿಟಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ, ಜಯಲಕ್ಷ್ಮೀ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ತಿರುಮಲೇಶ್, ತಾಪಂ ಮಾಜಿ ಸದಸ್ಯ ಗಡಿಮಾಕುಂಟೆ ಸಿದ್ದೇಶ್, ಮಾಜಿ ಜಿಪಂ ಸದಸ್ಯ ಎಚ್.ನಾಗರಾಜ್, ಪಲ್ಲಾಗಟ್ಟೆ ಶೇಖರಪ್ಪ ಇತರರು ಇದ್ದರು.
ಬಾಕ್ಸ್
ರಾಜ್ಯದ ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ನಮ್ಮ ಮಠಕ್ಕೆ ಬಂದಿದ್ದರು. ಅವರು ಮುಖ್ಯಮಂತ್ರಿ ಆಗುತ್ತಾರೋ, ಇಲ್ಲವೋ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ನೊಣವಿನಕೆರೆ ಶ್ರೀಗಳು ನುಡಿದರು. ''''''''ನಂಬು ನಂಬದಿರು ಮನವೆ ಹಂಬಲಿಸದಿರು'''''''' ಎಂಬಂತೆ ಡಿ.ಕೆ.ಶಿವಕುಮಾರ್ ಗುರುವನ್ನು ನಂಬಿದ್ದಾರೆ. ಅವರ ಮೇಲೆ ದೇವರು, ಜನರ ಆಶಿರ್ವಾದ ಸದಾ ಇರುತ್ತದೆ. ಗುರುಕರುಣೆ ಅವರ ಮೇಲಿದೆ. ಈಗ ಸೊಕ್ಕೆ ಗ್ರಾಮದ ಶ್ರೀ ಸತ್ಯಸಾಯಿಬಾಬಾ ದೇವಸ್ಥಾನದಲ್ಲಿದ್ದೇವೆ. ಜನರೂ ಸಹ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬ ಅಪೇಕ್ಷೆ ಪಟ್ಟಿದ್ದಾರೆ. ದೇವರು ಅವರು ಕೇಳಿದ್ದನ್ನು ಕರುಣಿಸಲಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ವಾಮೀಜಿ ಉತ್ತರಿಸಿದರು.
ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಗುರುಪೂರ್ಣಿಮ ಹಿನ್ನೆಲೆ ಶ್ರೀ ಸತ್ಯ ಸಾಯಿಬಾಬಾ ದೇವಸ್ಥಾನ ಆವರಣದಲ್ಲಿ ಅನ್ನದಾಸೋಹ ಕೊಠಡಿ ನಿರ್ಮಾಣಕ್ಕೆ ನೊಣವಿನಕೆರೆ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಗುದ್ದಲಿ ಪೂಜೆ ನೆರವೇರಿಸಿದರು.