ಶೀಘ್ರವೇ ಯುವನಿಧಿ ಯೋಜನೆ ಜಾರಿಗೆ ಕ್ರಮ
ಶಹಾಪುರದಲ್ಲಿ ಸಚಿವರಿಂದ ಜನತಾ ದರ್ಶನಕನ್ನಡಪ್ರಭ ವಾರ್ತೆ ಶಹಾಪುರಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಾಗೂ ಸಕಾಲಕ್ಕೆ ಅವರಿಗೆ ನ್ಯಾಯ ಒದಗಿಸಲು ಜನತಾ ದರ್ಶನ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಇದು ಜನರಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.ಇಲ್ಲಿನ ಆರಬೋಳ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವ ಸದುದ್ದೇಶದೊಂದಿಗೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಇದು ಅತ್ಯುತ್ತಮ ವೇದಿಕೆ. ಇದರ ಸದುಪಯೋಗ ಪಡೆಯಬೇಕು. ಅಧಿಕಾರಿಗಳು ಸಕಾಲಕ್ಕೆ ಮತ್ತು ಆದ್ಯತೆ ಮೇಲೆ ಕುಂದುಕೊರತೆ ಅರ್ಜಿಗೆ ಕಾಲಮಿತಿಯೊಳಗೆ ಇತ್ಯರ್ಥಸುಡಿಸಬೇಕು ಎಂದು ತಿಳಿಸಿದರು.
ಸರ್ಕಾರ ಜನರ ಸಮಸ್ಯೆಗಳನ್ನು ಅರಿತಿದೆ. ಈ ದಿಸೆಯಲ್ಲಿ ಮಹತ್ವಕಾಂಕ್ಷೆಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಶೇ.95 ರಷ್ಟು ಜನ ನೋಂದಣಿ ಮಾಡಿಕೊಂಡಿದ್ದು, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಮೂಲಕ ಜನರ ಮನೆ ಬಾಗಿಲಿಗೆ ಇವುಗಳ ಲಾಭ ತಲುಪಿದೆ. ಶೀಘ್ರವೆ ಯುವನಿಧಿ ಯೋಜನೆ ಜಾರಿಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಇತ್ಯರ್ಥವಾಗದ ಸಮಸ್ಯೆಗೆ ಜನತಾ ದರ್ಶನ ಮೂಲಕ ಪರಿಹಾರ ದೊರೆಯುತ್ತಿದೆ. ಕಾಲಮಿತಿಯೊಳಗೆ ಅರ್ಜಿ ಇತ್ಯರ್ಥಕ್ಕೂ ಕ್ರಮ ಕೈಗೊಂಡಿದ್ದು, ತಹಸೀಲ್ದಾರ್, ಪುರಸಭೆ ಮತ್ತು ನಗರಸಭೆಗಳಲ್ಲಿ ಇ-ಆಫೀಸ್ ಮೂಲಕ ಅರ್ಜಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಬೇಳೆಕಾಳು, ಎಣ್ಣೆ ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಹಾಗೂ ಹಸಿವಿನಿಂದ ಬಳಲುತ್ತಿದ್ದ ಬಡ ಜನರಿಗೆ ನೆರವಾಗಲು ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಸರ್ಕಾರದ ಸವಲತ್ತು ಸಕಾಲಕ್ಕೆ ಅಧಿಕಾರಿಗಳು ತಲುಪಿಸಿದಾಗ ಮಾತ್ರ ಸರ್ಕಾರದ ಧ್ಯೇಯೋದ್ದೇಶಗಳು ಈಡೇರಲಿವೆ. ಸಂಕಷ್ಟದಿಂದ ಬರುವ ಜನರ ಅರ್ಜಿ ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ನೀಡಿ ಇತ್ಯರ್ಥ ಪಡಿಸುವಂತೆ ತಿಳಿಸಿದರು.ಜಿಲ್ಲೆಯ ಯಾದಗಿರಿ, ಸುರಪುರ ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. 583 ಅರ್ಜಿ ಸ್ವೀಕರಿಸಲಾಗಿದ್ದು, ಈ ಪೈಕಿ 477 ಅರ್ಜಿ ಇತ್ಯರ್ಥಪಡಿಸಲಾಗಿದೆ. ಬಾಕಿ ಅರ್ಜಿ ಇತ್ಯರ್ಥಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಸಚಿವರು ಸುಮಾರು 50 ಕ್ಕೂ ಹೆಚ್ಚು ಅರ್ಜಿಗೆ ಸ್ಪಂದಿಸಿ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ಬೇಳೆಕಾಳು ಕಿಟ್ ವಿತರಣೆ ಮಾಡಿದರು.ವಿವಿಧ ಮಳಿಗೆಗಳ ಉದ್ಘಾಟಿಸಿದ ಸಚಿವರು
ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಕಾರ್ಮಿಕ ಇಲಾಖೆ, ಭಾರತೀಯ ಸ್ಟೇಟ್ ಬ್ಯಾಂಕ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರಸಭೆ ಶಹಾಪುರ ವತಿಯಿಂದ ಆಯೋಜಿಸಿದ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿ ವೀಕ್ಷಿಸಿದರು.ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಗರೀಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಸುರಪುರ ಡಿವೈಎಸ್ಪಿ ಜಾವಿದ್ ಇನಾಮದಾರ್ ಇತರರಿದ್ದರು. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.