ಮರ ಕಡಿಯಲು ಒಪ್ಪಿಗೆ ಖಂಡಿಸಿ ಜಯ ಕರ್ನಾಟಕ ಪ್ರತಿಭಟನೆ

KannadaprabhaNewsNetwork | Published : Apr 16, 2025 12:40 AM

ಯಾರದೋ ಒತ್ತಡ, ಪ್ರಭಾವಕ್ಕೆ ಮಣಿದು ಇಲಾಖೆ ಅಧಿಕಾರಿಗಳು ಪರಿಸರ ಹಾಳು ಮಾಡುವುದು ಸರಿಯಲ್ಲ. ಕಚೇರಿಯಲ್ಲೇ ಕುಳಿತು ಮರ ಕಡಿಯಲು ಆದೇಶಿಸಿರುವುದು ನಿಮ್ಮ ಜವಾಬ್ದಾರಿಯೂ ಅಲ್ಲ. ಸ್ಥಳ ವೀಕ್ಷಣೆ ನಡೆಸಿ ಅದು ಅಪಾಯಕಾರಿಯೋ, ಅಲ್ಲವೋ ಎನ್ನುವುದನ್ನು ಮನಗಾಣಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಅಶೋಕನಗರ ಮೂರನೇ ಕ್ರಾಸ್‌ನಲ್ಲಿರುವ ಬೃಹದಾಕಾರದ ಮಹಾಗನಿ ಮರ ಹಾಗೂ ಮರದ ಕೊಂಬೆಗಳನ್ನು ಕಡಿದುಹಾಕುವಂತೆ ಅರಣ್ಯ ಇಲಾಖೆ ಆದೇಶಿಸಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸ್ಥಳ ಪರಿಶೀಲನೆಯನ್ನೇ ನಡೆಸದೆ ಅಪಾಯಕಾರಿಯಲ್ಲದ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡದ, ಸದಾಕಾಲ ನೆರಳು ನೀಡುವಂತಹ ಮರವನ್ನು ಕಡಿಯಲು ಲಿಖಿತ ಆದೇಶ ಪತ್ರ ನೀಡಿರುವುದು ಸರಿಯಲ್ಲ ಎಂದು ಸಂಘಟನೆಯ ಅಧ್ಯಕ್ಷ ಯೋಗಾನಂದ ಖಂಡಿಸಿದರು.

ಯಾರದೋ ಒತ್ತಡ, ಪ್ರಭಾವಕ್ಕೆ ಮಣಿದು ಇಲಾಖೆ ಅಧಿಕಾರಿಗಳು ಪರಿಸರ ಹಾಳು ಮಾಡುವುದು ಸರಿಯಲ್ಲ. ಕಚೇರಿಯಲ್ಲೇ ಕುಳಿತು ಮರ ಕಡಿಯಲು ಆದೇಶಿಸಿರುವುದು ನಿಮ್ಮ ಜವಾಬ್ದಾರಿಯೂ ಅಲ್ಲ. ಸ್ಥಳ ವೀಕ್ಷಣೆ ನಡೆಸಿ ಅದು ಅಪಾಯಕಾರಿಯೋ, ಅಲ್ಲವೋ ಎನ್ನುವುದನ್ನು ಮನಗಾಣಬೇಕು. ಮಹಾಗನಿ ಮರದಿಂದ ಅಲ್ಲಿ ಯಾರಿಗೂ ಯಾವುದೇ ಮನೆಗೂ ತೊಂದರೆ ಆಗುತ್ತಿಲ್ಲ. ಪೂರ್ವಾಗ್ರಹಪೀಡಿತರಾಗಿ ಆದೇಶಿಸುವುದಕ್ಕೂ ಮುನ್ನ ಸರಿಯಾಗಿ ಪರಾಮರ್ಶೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ವರ್ತನೆ ಇದೇ ರೀತಿ ಮುಂದುವರೆದರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಜೈ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ, ಮುಖಂಡರಾದ ಎನ್‌.ಚಂದ್ರಶೇಖರ್, ಹರೀಶ್, ಬಸವರಾಜು ಇತರರಿದ್ದರು.

ಚಿರತೆ ದಾಳಿ ಎರಡು ಮೇಕೆಗಳು ಬಲಿ

ಮಳವಳ್ಳಿ: ತಾಲೂಕಿನ ಮಾದಹಳ್ಳಿ ಹೊರವಲಯದ ಮನೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೇಕೆಗಳ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ ಎರಡು ಮೇಕೆಗಳನ್ನು ಕೊಂದು ಹಾಕಿದೆ.

ಗ್ರಾಮದ ಟಿ.ಸಿ.ಸುಂದರ್ ಗ್ರಾಮದ ಹೊರವಲಯದ ತಮ್ಮ ಮನೆ ಬಳಿ ಮೇಕೆಗಳ ಫಾರಂ ನಿರ್ಮಿಸಿ ಸಾಕುತ್ತಿದ್ದರು. ಮಂಗಳವಾರ ಬೆಳಗಿನ ಜಾವ ಮೇಕೆಗಳ ಹಿಂಡಿನ ಮೇಲೆ ದಾಳಿ ಮಾಡಿ ಚಿರತೆ ಸುಮಾರು 20 ಸಾವಿರ ರು ಮೌಲ್ಯದ ಎರಡು ಮೇಕೆಗಳನ್ನು ಕೊಂದು ಹಾಕಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತ ಟಿ.ಸಿ.ಸುಂದರ್ ಮಾತನಾಡಿ, ಕಳೆದ ಹಲವು ತಿಂಗಳಿಂದ ನಿರಂತರವಾಗಿ ಚಿರತೆ ದಾಳಿ ಮಾಡಿ ಐದಾರು ಮೇಕೆಗಳನ್ನು ತಿಂದು ಹಾಕಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಚಿರತೆಗಳ ಹಾವಳಿಗೆ ಕಡಿವಾಣ ಹಾಕಬೇಕು. ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.