ಕನ್ನಡಪ್ರಭ ವಾರ್ತೆ ಉಡುಪಿ
ಸಂಸದರಾಗಿ ಅಲ್ಪ ಅವಧಿಯಲ್ಲಿ ಅಧಿಕಾರದಲ್ಲಿದ್ದರೂ ಜಯಪ್ರಕಾಶ್ ಹೆಗ್ಡೆ ತಮ್ಮ ಕ್ಷೇತ್ರದ ಜನರಗಾಗಿ ಶ್ರಮಿಸಿದ್ದಾರೆ. ಅಡಿಕೆ ಮತ್ತು ಕಾಫಿ ಬೆಳೆಗಾರರ ಬದುಕಿನ ಧ್ವನಿಯಾಗಿದ್ದಾರೆ. ಅವರನ್ನು ಸಂಸತ್ತಿಗೆ ಆಯ್ಕೆ ಮಾಡುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಅದೃಷ್ಟ. ಆದ್ದರಿಂದ ನಾವೆಲ್ಲರೂ ಜಯಪ್ರಕಾಶ್ ಹೆಗ್ಡೆ ಅವರ ಜಯಕ್ಕಾಗಿ ಪಣ ತೊಟ್ಟಿದ್ದೇವೆ ಎಂದು ತರೀಕೆರೆ ಶಾಸಕ ಜಿ. ಎಚ್. ಶ್ರೀನಿವಾಸ್ ಹೇಳಿದರು.ಅವರು ತರೀಕೆರೆ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಮತಪ್ರಚಾರದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಸುಳ್ಳು ಭರವಸೆಗಳನ್ನು ನೀಡಿ ನಮ್ಮಿಂದ ಓಟು ಪಡೆದು ಜಯ ಗಳಿಸಿದ ಬಿಜೆಪಿಯ ಸಂಸದರು ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿಲ್ಲ, ಕ್ಷೇತ್ರಕ್ಕೆ ಬಂದರೆ ತಾನೇ ಜನರ ಕಷ್ಟ ಅರ್ಥವಾಗುವುದು ? ಕೊನೆಗೆ ಅವರ ಪಕ್ಷದವರೇ ‘ಗೋ ಬ್ಯಾಕ್’ ಎಂದು ಅಭಿಯಾನ ಆರಂಭಿಸಿದಾಗ ಬೇರೆ ಯಾವುದೋ ಕ್ಷೇತ್ರಕ್ಕೆ ಹೋಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ಹಾಗಲ್ಲ, ಅಧಿಕಾರ ಇರಲಿ ಇಲ್ಲದಿರಲಿ, ನಮ್ಮಲ್ಲಿಯ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅಡಿಕೆಗೆ ಇಂದು ಉತ್ತಮ ಬೆಲೆ ಸಿಗುತ್ತಿದ್ದರೇ ಅದಕ್ಕೆ ಮೂಲ ಕಾರಣ ಜಯಪ್ರಕಾಶ ಹೆಗ್ಡೆ. ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಸುಳ್ಳು ಭರವಸೆಗಳನ್ನು ನೀಡಿ, ಕೈಯಲ್ಲಿ ‘ಚೊಂಬು’ ನೀಡಿರುವ ಕೇಂದ್ರ ಸರ್ಕಾರದ ಬಗ್ಗೆ ಜನರಿಗೆ ಜಿಗುಪ್ಸೆ ಉಂಟಾಗಿದೆ. ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೇ ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ ಎಂದು ಹೇಳಿದರು.
ಕೆಲ್ಸ ಮಾಡದಿದ್ರೆ ನನ್ನನ್ನು ಪ್ರಶ್ನಿಸಿ :ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ತಾವು ಆಯ್ಕೆ ಮಾಡಿದ ಪ್ರತಿನಿಧಿ ಕೆಲಸ ಮಾಡದಿದ್ದಾಗ ಜನರು ಪ್ರಶ್ನಿಸಬೇಕು. ಆದರೆ ಜನಪ್ರತಿನಿಧಿ ತನ್ನ ಕ್ಷೇತ್ರಕ್ಕೆ ಮರಳಿ ಬಾರದಿದ್ದಾಗ ಪ್ರಶ್ನಿಸುವುದಾದರೂ ಯಾರನ್ನು ? ಆದರೆ ಅದನ್ನು ಸುಳ್ಳಾಗಿಸುತ್ತೇನೆ. ಜನರ ಕರೆಗೆ ಓಗೋಡುತ್ತೇನೆ ಎಂದು ಹೇಳಿದರು.
ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದವರು ಮೌನಕ್ಕೆ ಶರಣಾಗಿದ್ದಾರೆ. ಆದ್ದರಿಂದ ಅವರಿಗೆ ಉದ್ಯೋಗ ಪೂರಕ ಉದ್ಯಮಗಳನ್ನು ಸ್ಥಾಪಿಸಬೇಕು. ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದರು.