ಮಹದಾಯಿ, ಮೇಕೆದಾಟು ಯೋಜನೆ ಜಾರಿಗೆ ಬರಲಿ
ಪೆನ್ಡ್ರೈವ್ ವಿಚಾರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಪೆನ್ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ಪರಿಶೀಲಿಸುತ್ತಿದ್ದು, ನ್ಯಾಯ ಸಿಗಲಿದೆ. ಶೀಘ್ರದಲ್ಲೇ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯುತ್ತೇವೆ. ಸೋಲಿನ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಭವಾನಿ ರೇವಣ್ಣರವರು ಅಪಹರಣ ಪ್ರಕರಣ ಎದುರಿಸಬೇಕಾದರೆ ಆ ವಿಚಾರಣೆಯು ಮುಕ್ತವಾಗಿ ನ್ಯಾಯ ಸಿಗುವ ಕೆಲಸ ಸದ್ಯದಲ್ಲೆ ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ’ ಎಂದು ಹೇಳಿದರು.‘ಲೋಕಾಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋಲಿಗೆ ಕಾರಣ ಏನು ಎಂಬುದನ್ನು ನಮ್ಮಲ್ಲಿ ಆಂತರಿಕವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಜತೆಗೆ ನೂತನವಾಗಿ ಸಂಸದರಾಗಿ ಆಯ್ಕೆಗೊಂಡ ಶ್ರೇಯಸ್ ಪಟೇಲ್ ಅವರಿಗೆ ವಯಕ್ತಿಕ ಮತ್ತು ಪಕ್ಷದ ಪರವಾಗಿ ಹೃದಯಪೂರ್ವಕ ಶುಭಾಶಯ ತಿಳಿಸುತ್ತೇನೆ. ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯವಾದ ಕೆಲಸ ಆಗಲಿ’ ಎಂದು ಹೇಳಿದರು.
‘ಸಂಪೂಟದಲ್ಲಿ ಕುಮಾರಸ್ವಾಮಿಗೆ ಗೌರವ ನೀಡಿ ಸಂಪೂಟದಲ್ಲಿ ಸಚಿವರಾಗಿ ಆಯ್ಕೆ ಮಾಡಿದ ಮೋದಿ ಅವರಿಗೆ ಕೃತಜ್ಞತೆ ಅರ್ಪಿಸುತ್ತೇವೆ. ಕೇಂದ್ರ ಮಂತ್ರಿ ಮಂಡಲ ಸೇರುವ ಜೋಷಿ, ಶೋಭಕರದ್ಲಾಜೆ, ವಿ.ಸೋಮಣ್ಣ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೂ ಕೂಡ ಶುಭಾಶಯ ಅರ್ಪಿಸುತ್ತೇವೆ. ಕುಮಾರಣ್ಣರ ಪರಿಶ್ರಮದಿಂದಾಗಿ ನಾಡಿನ ಜ್ವಲಂತ ಸಮಸ್ಯೆ ಆದಂತಹ ಮೇಕೆದಾಟು, ಮಹಾದಾಯಿ ಸೇರಿದಂತೆ ಎಲ್ಲಾ ಸಮಸ್ಯೆಯನ್ನು ಪರಿಹಾರ ಒದಗಿಸಿಕೊಡಬೇಕು. ಹಾಸನಕ್ಕೆ ಐಐಟಿ ಹಾಗೂ ಕಾರ್ಗೋ ವಿಮಾನ ನಿಲ್ದಾಣ ನಿರ್ಮಾಣ, ಕೃಷಿ ಮತ್ತು ಕೈಗಾರಿಕೆಯು ಜಿಲ್ಲೆಯಲ್ಲಿ ಆಗಬೇಕು’ ಎಂದು ಒತ್ತಾಯಿಸಿದರು.