ಶಾಂತಿಯುತ ಜೀವನಕ್ಕಾಗಿ ಯೇಸುವಿನ ತತ್ವಾದರ್ಶಗಳು ಅಗತ್ಯ

KannadaprabhaNewsNetwork | Updated : Dec 26 2023, 01:31 AM IST

ಸಾರಾಂಶ

ಕುಷ್ಟಗಿ ಹಾಗೂ ಕಾರಟಗಿಯಲ್ಲಿ ಕ್ರಿಸ್ಮಸ್ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕುಷ್ಟಗಿ: ಯೇಸುವಿನ ತತ್ವಗಳು, ಜೀವನಾದರ್ಶಗಳನ್ನು ಅಳವಡಿಸಿಕೊಂಡು ಸುಖ, ಶಾಂತಿಯಿಂದ ಜೀವನ ನಡೆಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಭಯ್ಯಾಪುರ ಹೇಳಿದರು.ಪಟ್ಟಣದ ಆತ್ಮಭರಿತ ಸಾರ್ವತ್ರಿಕ ಎಜಿ ಸಭೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರಿಸ್‌ಮಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯೇಸುವಿನ ಸಂದೇಶವನ್ನು ಜಗತ್ತಿಗೆ ಸಾರೋಣ. ಯೇಸುವಿನ ಜನ್ಮದಿನವನ್ನು ಭಕ್ತಿ-ಭಾವದಿಂದ ಆಚರಿಸೋಣ ಎಂದರು. ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕ್ರೈಸ್ತರು ಶಾಂತಿದೂತರು. ಯಾರಿಗೂ ಕೆಡಕನ್ನು ಬಯಸದೆ ಎಲ್ಲರೂ ಶಾಂತಿ, ಸೌಹಾರ್ದದಿಂದ ಬಾಳುವ ಸಮುದಾಯ. ನಮ್ಮತನವನ್ನು ನಾವೂ ಬಿಟ್ಟು ಕೊಡದೆ ನಮ್ಮನ್ನು ನಾವು ಪ್ರೀತಿಸಬೇಕು. ನಾವೆಲ್ಲರೂ ಸಹಬಾಳ್ವೆಯಿಂದ ಬದುಕೋಣ ಎಂದರು.ಗೃಹರಕ್ಷಕ ದಳದ ಕಮಾಂಡರ್ ರವೀಂದ್ರ ಬಾಕಳೆ ಮಾತನಾಡಿ, ಏಸುವಿನ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ನಿವೃತ್ತ ಲೋಕಾಯುಕ್ತ ಅಧಿಕಾರಿ ಸಿದ್ದರಾಮಪ್ಪ, ಎ.ವೈ. ಲೋಕರೆ, ಕಲಾವತಿ ಮೆಣೇಧಾಳ, ಮಹಾಲಿಂಗಪ್ಪ ದೋಟಿಹಾಳ ಮಾತನಾಡಿದರು. ಆತ್ಮಭರಿತ ಸಾರ್ವತ್ರಿಕ ಎಜಿ ಸಭಾಪಾಲಕ ಹಾಗೂ ಫಾದರ್ ಎಸ್.ಕೆ. ಜೋಷ್ ಅಧ್ಯಕ್ಷತೆ ವಹಿಸಿ, ಯೇಸುಕ್ರಿಸ್ತನ ಸಂದೇಶ ಬೋಧನೆ ಮಾಡಿದರು. ಪುರಸಭೆ ಸದಸ್ಯ ಮೈನುದ್ದೀನ್‌ ಮುಲ್ಲಾ, ಮಾರುತಿ, ಅಗ್ನಿಶಾಮಕ ದಳದ ಅಧಿಕಾರಿ ರಾಜು ನರಸಪ್ಪ, ಹಂಪಯ್ಯ, ರಾಮು ವಂಕಲಕುಂಟಾ, ವಿಜಯ ಇನ್ನಿತರರಿದ್ದರು. ಬದ್ರಿನಾಥ ರಾಠೋಡ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಯೇಸುವಿನ ಪ್ರಾರ್ಥಿಸುವ ಹಾಡು ಹಾಡಲಾಯಿತು.

ಸಾಮೂಹಿಕ ಪ್ರಾರ್ಥನೆ: ಕಾರಟಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕ್ಯಾಂಪ್‌ಗಳಲ್ಲಿನ ಚರ್ಚ್‌ಗಳಲ್ಲಿ ಸೋಮವಾರ ಕ್ರಿಸ್‌ಮನ್‌ ಹಬ್ಬವನ್ನು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.ಪಟ್ಟಣದಲ್ಲಿ ಬೂದುಗುಂಪಾ ರಸ್ತೆಯಲ್ಲಿನ ಮೆಥೋಡಿಸ್ಟ್ ಚರ್ಚ್‌ನಲ್ಲಿ ಬೆಳಗ್ಗೆ ನಿಗದಿತ ಸಮಯಕ್ಕೆ ಸೇರಿದ ಕ್ರೈಸ್ತ ಸಮುದಾಯದವರು ಒಬ್ಬರಿಗೊಬ್ಬರು ಹಬ್ಬದ ಶುಭ ವಿನಿಮಯ ಮಾಡಿಕೊಂಡ ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಪಾಸ್ಟರ್ ರೆವ್‌ ಸುಧೀರ್ ಸಾಮೂಹಿಕ ಪ್ರಾರ್ಥನೆ ನಡೆಸಿದರು.ಇನ್ನೂ ಅಡೋನಾಯ್ ಮಿನಿಸ್ಟ್ರೀಸ್‌ನ ರಾಘಾ ಚರ್ಚ್‌ನಲ್ಲಿ ಬೆಳಗ್ಗೆ ೮ರಿಂದ ರಾತ್ರಿ ೮ ಗಂಟೆ ವರೆಗೆ ನಿರಂತರ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಫಾದರ್ ಆಂಡ್ರ್ಯೋ ಅಲ್ವಿನ್ ಕೊಣ್ಣೂರು ನೇತೃತ್ವದಲ್ಲಿ ದೇಶ, ರಾಜ್ಯ ಮತ್ತು ನಮ್ಮ ಭಾಗದ ಸಮಸ್ತ ಜನತೆ ಕಲ್ಯಾಣಕ್ಕಾಗಿ, ಉತ್ತಮ ಮಳೆ, ಬೆಳೆಗಾಗಿ ಈ ನಿರಂತರ ಪ್ರಾರ್ಥನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೆರೆದಿದ್ದ ಎಲ್ಲ ಕ್ರೈಸ್ತ ಸಮುದಾಯದವರಿಗೆ ಯೇಸು ಕ್ರಿಸ್ತನ ಜನನ ಹಾಗೂ ಭೂಲೋಕಕ್ಕೆ ಕ್ರಿಸ್ತನು ಹುಟ್ಟಿ ಬಂದ ಲೋಕ ರಕ್ಷಣೆಗಾಗಿ ತನ್ನನ್ನು ತಾನೂ ಸಮರ್ಪಿಸಿಕೊಂಡ ಬಗೆ, ಲೋಕಕ್ಕೆ ಶಾಂತಿ ಸಂದೇಶವನ್ನು ಸಾರಿದ ಬಗ್ಗೆ ವಿವರಿಸಿದರು.ಆರ್.ಜಿ. ರಸ್ತೆಯ ಇಮ್ಮಾನುವೇಲ್ ಚರ್ಚ್‌ನಲ್ಲಿ ಪಾಸ್ಟರ್ ಜಯರಾಜ್ ಮತ್ತು ನವಲಿ ರಸ್ತೆಯ ರಾಮನಗರದ ಚರ್ಚ್‌ನಲ್ಲಿ ಪಾಸ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ಜತೆಗೆ ತಾಲೂಕಿನ ಮರ್ಲಾನಹಳ್ಳಿ, ಚೆಳ್ಳೂರು ಕ್ಯಾಂಪ್, ದೇವಿಕ್ಯಾಂಪ್‌ನಲ್ಲಿ ಮೂರು ಚರ್ಚ್‌ಗಳಲ್ಲಿ, ಕಿಂದಿಕ್ಯಾಂಪ್, ಬಸವಣ್ಣ ಕ್ಯಾಂಪ್, ರಾಮನಗರ ಮತ್ತು ರವಿನಗರದಲ್ಲಿನ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ಕ್ರೈಸ್ತರು ಆನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಿಹಿ ಹಂಚಿದರು.

Share this article