ಕನ್ನಡಪ್ರಭ ವಾರ್ತೆ ಭದ್ರಾವತಿ
ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯ, ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಕಾರ್ಮಿಕರ ಸಂತ ಜೋಸೆಫರ ದೇವಾಲಯ, ಮಾವಿನಕೆರೆ ಸಂತ ತೆರೆಸಮ್ಮನವರ ದೇವಾಲಯ, ನ್ಯೂಟೌನ್ ವೇನ್ಸ್ ಚರ್ಚ್, ಬೈಪಾಸ್ ರಸ್ತೆ, ಬುಳ್ಳಾಪುರ ತೆಲುಗು ಚರ್ಚ್ ಸೇರಿದಂತೆ ತಾಲೂಕಿನ ಹಲವು ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು .
ಚರ್ಚ್ಗಳಲ್ಲಿ ನಿರ್ಮಿಸಲಾಗಿದ್ದ ಕ್ರಿಸ್ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ವೃತ್ತಾಂತ ನೆನಪಿಸುವ ಗೋದಲಿಗಳು, ದೀಪ ಅಲಂಕಾರದೊಂದಿಗೆ ಗಮನ ಸೆಳೆದವು. ಬುಧವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಕ್ರೈಸ್ತರು ಸಮುದಾಯದವರು ಪಾಲ್ಗೊಂಡಿದ್ದರು.‘ಕ್ರಿಸ್ಮಸ್’ ಯೇಸುಕ್ರಿಸ್ತರ ಜನನದ ಶುಭಗಳಿಗೆಯ ಸ್ಮರಣೆ ಇದರ ಸಂಕೇತವಾಗಿ ಬಿಳಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಂತ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು .
ಚರ್ಚ್ಗಳಲ್ಲಿ ಕೇಕ್ ಹಂಚಲಾಯಿತು. ಸಾಂಟಾ ಕ್ಲಾಸ್ ವೇಷ ಧರಿಸಿ `ಕ್ರಿಸ್ಮಸ್'''''''' ಗೀತೆಗಳು (ಕ್ಯಾರೆಲ್ಸ್), ಯುವ ಸಮುದಾಯದವರು ಸಂಗೀತದ ಅಬ್ಬರದೊಂದಿಗೆ ಗಾಯನ, ನೃತ್ಯ ನಡೆಸಿ ಸಂಭ್ರಮಿಸಿದರು. ಮತ್ತೊಂದೆಡೆ ಕ್ರೈಸ್ತ ಸಮುದಾಯದವರ ಮನೆ ಮನೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತ ನಕ್ಷತ್ರಗಳು ಕಂಗೊಳಿಸಿದವು. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ವ್ಯಕ್ತಪಡಿಸಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೆರೆಹೊರೆಯ ಜನರಿಗೆ ಹಂಚಿ, ಹಬ್ಬದ ಬಗೆ ಬಗೆಯ ಭೋಜನ ಸವಿಯಲಾಯಿತು. .ಕ್ರಿಸ್ಮಸ್ ಬಾಹ್ಯ ಆಡಂಬವರಾಗಿರದೆ ಪರರ ಕಷ್ಟಕ್ಕೆ ಸ್ಪಂದಿಸುವ ಹಬ್ಬವಾಗಿದೆ. ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ವಿಶ್ವಗುರು ಪೋಪ್ ಲಿಯೋರವರು ಜ್ಯೂಬಿಲಿ ವರ್ಷವನ್ನಾಗಿ ವಿಶೇಷವಾಗಿ ಘೋಷಿಸಿ, ‘ಭರವಸೆಯ ಯಾತ್ರಾತ್ರಿಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲು ವಿಶ್ವದಾದ್ಯಂತ ಕರೆ ನೀಡಿದ್ದರು. ವರ್ಷವಿಡಿ ಈ ವಾಕ್ಯದಡಿಯಲ್ಲಿ ಪ್ರಾರ್ಥಿಸಿದ್ದು , ಇದರ ಸಮಾರೋಪವನ್ನು ಇದೆ ಸಂದರ್ಭದಲ್ಲಿ ವಿಶ್ವದ ಎಲ್ಲಾ ಚರ್ಚ್ಗಳಲ್ಲಿಯೂ ನೆರವೇರಿಸಲಾಗಿದೆ.