- ಹರಿಹರ ನಗರಸಭಾಧ್ಯಕ್ಷೆ ಕವಿತಾ ಅಭಿಮತ । ಮೇಳದಲ್ಲಿ 485 ವಿದ್ಯಾರ್ಥಿಗಳು ಭಾಗಿ
- - -ಕನ್ನಡಪ್ರಭ ವಾರ್ತೆ ಹರಿಹರ
ಎಸ್ಜೆವಿಪಿ ಕಾಲೇಜು ನಮ್ಮ ತಾಲೂಕಿನ ಮೊದಲ ಪದವಿ ಕಾಲೇಜಾಗಿದೆ. 55 ವರ್ಷಗಳಿಂದ ನಿರಂತರ ಶೈಕ್ಷಣಿಕ ಸೇವೆ ನೀಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಮೇಳವನ್ನೂ ಆಯೋಜಿಸಿ, ಕಾಲೇಜು ಮತ್ತು ತಾಲೂಕಿನ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ ಎಂದು ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹೇಳಿದರು.ನಗರದ ಎಸ್ಜೆವಿಪಿ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳ-2025 ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯೆಯಿಂದ ಹಿಡಿದು ಉದ್ಯೋಗವನ್ನೂ ನೀಡುವ ಉತ್ತಮ ಕಾರ್ಯಕ್ಕೆ ಕಾಲೇಜು ಮುಂದಾಗಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾದ ದಾವಣಗೆರೆ ವಿಶ್ವವಿದ್ಯಾಲಯ ಕುಲಸಚಿವ ಶಬ್ಬಿರ್ ಘಂಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ದೂರದ ಬೆಂಗಳೂರು ಮತ್ತಿತರ ನಗರಗಳಿಗೆ ಉದ್ಯೋಗ ಪಡೆಯಲು ಅಲೆದಾಡುವ ಪರಿಸ್ಥಿತಿ ಇತ್ತು. ಆದರೆ, ಇಂದು ಉದ್ಯೋಗ ಮೇಳ ಆಯೋಜಿಸಿದ್ದರಿಂದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶ ಸಿಗುತ್ತಿವೆ. ಇಂತಹ ಮೇಳಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉದ್ಯೋಗ ಹೊಂದಬೇಕು. ಸಂಸ್ಥೆ ಕಾರ್ಯದರ್ಶಿ ಪ್ರಶಾಂತ್ ದುಗ್ಗತ್ತಿಮಠ್ ಮುಂದಾಳತ್ವದಲ್ಲಿ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡಯಲಿ ಎಂದು ಶುಭ ಕೋರಿದರು.ಹರಿಹರ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯದ ಅಭಿವೃದ್ಧಿ ಹೊಂದುವ ಬಗ್ಗೆ ಮಾಹಿತಿ ನೀಡಿದರು. ಸಮಾಜ ಸೇವಕ ಮಾಗನಹಳ್ಳಿ ಪರುಶುರಾಮ್ ಸಂಸ್ಥೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮೇಳದ ಸಂಚಾಲಕ ಜಾಕವುಲ್ಲ, ನಿರ್ದೇಶಕರಾದ ತಿಪ್ಪೇಸ್ವಾಮಿ, ಶಿವಾನಂದಪ್ಪ.ಕಾಲೇಜಿನ ಪ್ರಾಚಾರ್ಯ ಶಿವಗಂಗಮ್ಮ, ಉಪನ್ಯಾಸಕರಾದ ರಮೇಶ್, ಭರಮಪ್ಪ, ವೀರಣ್ಣ ಶೆಟ್ಟರ್, ಸಿದ್ದಯ್ಯ, ವಿಶಾಲ್, ದಿವಾಕರ್. ಸಂಕಿರ್ಣ, ಪ್ರಿಯಾಂಕ, ರಶ್ಮಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಎಸ್ಜೆವಿಪಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸುಮಾರು 485 ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು.
- - --೩೦ಎಚ್ಆರ್ ಆರ್೦೧:
ಹರಿಹರದ ಎಸ್ಜೆವಿಪಿ ಪದವಿ ಮಹಾವಿದ್ಯಾಲಯದಿಂದ ಶನಿವಾರ ನಡೆದ ಉದ್ಯೋಗ ಮೇಳವನ್ನು ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಉದ್ಘಾಟಿಸಿದರು.