ಕನ್ನಡಪ್ರಭ ವಾರ್ತೆ ಮೈಸೂರುಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿ, ಆರ್ಥಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಈಗ ಜನನ, ಮರಣ ಪ್ರಮಾಣ ಪತ್ರದ ಶುಲ್ಕವನ್ನು 10 ಪಟ್ಟು ಏರಿಸಿದೆ ಎಂದು ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿ ಮಂಜು ಆರೋಪಿಸಿದ್ದಾರೆ.ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ಹಾಲು ದರ ಏರಿಕೆ ಮಾಡಿ, ಜನನ, ಮರಣ ಪ್ರಮಾಣಪತ್ರದಲ್ಲೂ ಹಣಗಳಿಸಲು ಮುಂದಾಗಿದೆ. ಈ ಮೊದಲು ಜನನ, ಮರಣ ಪ್ರಮಾಣಪತ್ರ ಪಡೆಯಲು 5 ರೂ. ಶುಲ್ಕವಿತ್ತು. ಆದರೆ ಈಗ ಅದನ್ನು 50 ರೂ.ಗೆ ಏರಿಸಿದ್ದಾರೆ. ಅಲ್ಲದೇ ದಂಡದ ಶುಲ್ಕವೂ ಏರಿಕೆಯಾಗಿದೆ.5 ಗ್ಯಾರಂಟಿ ಕೊಟ್ಟು 10 ಪಟ್ಟು ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದೆ. ಈ ಕೂಡಲೇ ಏರಿಸಿದ ಶುಲ್ಕ ಹಿಂದಕ್ಕೆ ಪಡೆದು ಮೊದಲಿನ ಶುಲ್ಕವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.ನಗರ ಪಾಲಿಕೆ ನೀರಿನ ದರ ಹೆಚ್ಚಳ, ಕಂದಾಯ ಹೆಚ್ಚಳ, ಈಗ ಜನನ ಮರಣ ಪ್ರಮಾಣ ಪತ್ರ ಹೆಚ್ಚಳ, ಮಾರ್ಗಸೂಚಿಯಲ್ಲಿ 2 ರೂ. ಇದ್ದ ಪರಿಷ್ಕೃತ ದರ 20 ರೂ. 5 ರೂ. ಇದ್ದ ಪರಿಷ್ಕೃತ ದರ 50 ವಿಳಂಬವಾದರೆ ದಂಡ 50 ರೂ. ಗಳು ಇದು ಅವೈಜ್ಞಾನಿಕವಾಗಿದ್ದು ಸಾರ್ವಜನಿಕರಲ್ಲಿ ಬಡವರು, ಮಧ್ಯಮ ವರ್ಗದವರು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಂದ ಅಧಿಕೃತವಾಗಿ ಹಣ ಸುಲಿಗೆ ಕೇಂದ್ರವಾಗಿದೆ ಎಂದು ದೂರಿದರು.ಒಬ್ಬ ಮನುಷ್ಯ ಹುಟ್ಟಿದ ದಿನ ಪತ್ರ ಪಡೆಯುವುದರೊಂದಿಗೆ ಸುಲಿಗೆ ಪ್ರಾರಂಭವಾಗಿ ಕಡೆಗೆ ಅವರ ಸಾವಿನ ಪ್ರಮಾಣ ಪತ್ರ ಪಡೆಯುವವರೆಗೂ ಹಣ ಸುಲಿಗೆ ಮಾಡುತ್ತಿರುವುದು ಮನುಕುಲಕ್ಕೆ ಅವಮಾನ. ಕಳೆದ ಒಂದು ವರ್ಷಗಳಿಂದ ನಗರ ಪಾಲಿಕೆಯಲ್ಲಿ ಸದಸ್ಯರಿಲ್ಲದ ಕಾರಣ ಇಂತಹ ಅವೈಜ್ಞಾನಿಕ ನಿರ್ಣಯವನ್ನು ಅಧಿಕಾರಿಗಳು ಅವರ ಮನಸೊ ಇಚ್ಚೆ ಮಾಡುತ್ತಿರುವುದು ಸರಿ ಇಲ್ಲ. ಈಗ ಮಾಡಿರುವ ಪರಿಷ್ಕೃತ ದರವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಾನೂನಿನ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.