ಕುಷ್ಟಗಿ/ ಹನಮಸಾಗರ: ಸಮಾಜದ ನಾಡಿಮಿಡಿತ ಅರಿತು, ಜನರ ನೋವು–ನಲಿವುಗಳಿಗೆ ಧ್ವನಿಯಾಗಿ, ವಸ್ತುನಿಷ್ಠ ವರದಿಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವೇ ನಿಜವಾದ ಪತ್ರಿಕೋದ್ಯಮ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಡಿಜಿಟಲ್, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಮುದ್ರಣ ಮಾಧ್ಯಮ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಮಹತ್ವದ ಸಂಗತಿ. ಜನರ ಸಮಸ್ಯೆ ಹುಡುಕಿ, ಅವುಗಳ ಹಿಂದಿನ ವಾಸ್ತವ ಅರಿತು ವರದಿ ಮಾಡಬೇಕು. ಉತ್ತಮ ವರದಿ ಅಧಿಕಾರಿಗಳ ಕಣ್ಣು ತೆರೆಸಬೇಕು. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ಸಮಾಜಕ್ಕೆ ಒಳಿತಾಗುವ ಬರಹಗಳಿಗೆ ಆದ್ಯತೆ ನೀಡಬೇಕು ಎಂದರು.
ಪತ್ರಕರ್ತರು ತಮ್ಮ ಹಲವು ಸಮಸ್ಯೆ ಎದುರಿಸುತ್ತಿದ್ದರೂ ಸಮಾಜದ ಧ್ವನಿಯಾಗಿದ್ದಾರೆ. ವೈಯಕ್ತಿಕ ಸಂಕಷ್ಟಗಳ ನಡುವೆಯೂ ಪತ್ರಿಕಾ ದಿನಾಚರಣೆ ಆಯೋಜಿಸಿರುವುದು ಶ್ಲಾಘನೀಯ. ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಮಾತನಾಡಿ, ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾತ್ರವಲ್ಲ, ಸಮಾಜದ ಕಾವಲುಗಾರನೂ ಹೌದು. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಮರೆಯಲಾಗದು ಹಲವು ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸಿವೆ ಎಂದರು.
ಪತ್ರಕರ್ತರ ಲೇಖನಿ ಸಮಾಜದ ಆಶಾಕಿರಣವಾಗಲಿ:
ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ, ಗುಳೆ, ಮೂಲಸೌಕರ್ಯ ಕೊರತೆ ಸೇರಿದಂತೆ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು. ಪರಿಣಾಮಕಾರಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದು, ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡಬೇಕು. ಪತ್ರಕರ್ತರ ಲೇಖನಿ ಸಮಾಜದ ಆಶಾಕಿರಣವಾಗಬೇಕು; ಜನರ ನೋವಿಗೆ ಧ್ವನಿಯಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಫಕೀರಪ್ಪ ಚಳಗೇರಿ, ರುದ್ರಪ್ಪಗೌಡ, ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ದುರ್ಗೇಶ ಮಡಿವಾಳರ, ಸೂಚಪ್ಪ ಭೋವಿ, ಆಶೀಫ್ ಡಾಲಾಯತ, ಶ್ರೀನಿವಾಸ ಜಹಾಗೀರದಾರ, ವಿ ಆರ್ ತಾಳಿಕೋಟಿ, ನಜಿರಸಾಬ ಮೂಲಿಮನಿ, ಮಂಜುನಾಥ ಹುಲ್ಲೂರು, ಚಂದಪ್ಪ ಕರಡಿ, ಜಯದೇವಿ ಉಪ್ಪಿನ್, ಸಂತೋಷ ತೋಟದ, ಮಲ್ಲಿಕಾರ್ಜುನ ದೋಟಿಹಾಳ, ಗೌರಮ್ಮ ಕುಡತಿನಿ, ಶಾರದಾ ಶೆಟ್ಟರ್, ಶ್ರೀದೇವಿ ಮಸ್ಕಿಮಠ, ಈರಣ್ಣ ಬಾದಾಮಿ, ಎನ್.ಶ್ಯಾಮಿದ್, ರೇಣುಕಾ ಪುರದ, ಶೋಭಾ ಪುರ್ತಗೇರಿ ಸೇರಿದಂತೆ ಕುಷ್ಟಗಿ, ಹನುಮಸಾಗರ, ದೋಟಿಹಾಳ ಹಾಗೂ ತಾವರಗೇರಾದ ಪತ್ರಕರ್ತರು, ಗಣ್ಯರು ಉಪಸ್ಥಿತರಿದ್ದರು. ಪತ್ರಕರ್ತ ಏಕನಾಥ ಮೆದಿಕೇರಿ ನಿರ್ವಹಿಸಿದರು.