ಕನ್ನಡಪ್ರಭ ವಾರ್ತೆ ನಂಜನಗೂಡು
ಜೀವ ವಿಮಾ ಪ್ರತಿನಿಧಿಗಳು ಎದುರುಸುತ್ತಿರುವ ಸಮಸ್ಯೆಗಳ ಈಡೇರಿಕೆಗಾಗಿ ಪ್ರತಿನಿಧಿಗಳು ಸಂಘಟಿತರಾಗಬೇಕು, ಅಗತ್ಯ ಬಿದ್ದರೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಜೀವ ವಿಮಾ ನಿಗಮದ ಪ್ರತಿನಿಧಿಗಳ ರಾಷ್ಟೀಯ ಸಮಿತಿ ಅಧ್ಯಕ್ಷ ಎಲ್. ಮಂಜುನಾಥ್ ಹೇಳಿದರು.ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಮಂಗಳವಾರ ನಡೆದ ಜೀವ ವಿಮಾ ಪ್ರತಿನಿಧಿಗಳ ಮೈಸೂರು ವಿಭಾಗೀಯ ಸಮ್ಮೇಳನ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಮಾ ಕ್ಷೇತ್ರಕ್ಕೆ ಹೆಚ್ಚಾಗಿ ಖಾಸಗಿ ಸಂಸ್ಥೆಗಳು ಕಾಲಿಟ್ಟಿರುವುದರಿಂದ ಜೀವ ವಿಮಾ ಪ್ರತಿನಿಧಿಗಳು ತೀವ್ರ ಪೈಪೋಟಿಯನ್ನು ಎದುರಿಸಬೇಕಾಗಿದೆ, ಸಂಸ್ಥೆ ಹಲವು ಉತ್ತಮ ಪಾಲಿಸಿಗಳನ್ನು ಹಿಂದಕ್ಕೆ ಪಡೆಯುತ್ತಿದೆ, ಪ್ರತಿನಿಧಿಗಳಿಗೆ ದೊರೆಯುತ್ತಿದ್ದ ಹಲವು ಸೌಲಭ್ಯ ಹಾಗೂ ಕಮಿಷನ್ ನಲ್ಲಿ ಕಡಿತ ಮಾಡುತ್ತಿರುವುದರಿಂದ ಪ್ರತಿನಿಧಿಗಳು ತೊಂದರೆಗೆ ಸಿಲುಕುತ್ತಿದ್ದಾರೆ, ಪ್ರತಿನಿಧಿಗಳ ಸಂಘ ನಮ್ಮ ಸದಸ್ಯರಿಗೆ ನ್ಯಾಯವಾಗಿ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಆಡಳಿತ ಮಂಡಳಿಯೊಡನೆ ಸಂಘರ್ಷ ನಡೆಸುತ್ತಿದೆ, ಪ್ರತಿನಿಧಿಗಳ ಹಿತ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.ಸಭೆಯಲ್ಲಿ ಜೀವ ವಿಮಾ ಪ್ರತಿನಿಧಿಗಳ ತಾಲೂಕು ಅಧ್ಯಕ್ಷರಾಗಿ ಎನ್. ರವಿ, ಗೌರವ ಅಧ್ಯಕ್ಷರಾಗಿ ಎನ್. ಪುಟ್ಟರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ. ಪ್ರಕಾಶ್, ಖಜಾಂಜಿಯಾಗಿ ಪಿ. ಚಂದ್ರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಟಿ.ಎಸ್. ಸಿದ್ದಲಿಂಗ ಒಡೆಯರ್, ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎನ್. ರವಿ, ರಾಜ್ಯ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ, ಬಿ.ಸಿ. ಗುರುಪಾದಸ್ವಾಮಿ, ಜಯರಾಮು, ಮೈಸೂರು ವಿಭಾಗದ ವಿಮಾ ನೌಕರರ ಸಂಘದ ಅಧ್ಯಕ್ಷ ರಾಮು, ಯೋಗೇಶ್, ಶಿವರುದ್ರಮ್ಮ, ನಂಜನಗೂಡು ಶಾಖಾಧಿಕಾರಿ ಎಸ್. ರಾಮಸ್ವಾಮಿ, ಬಿ.ಎಸ್. ಅರವಿಂದ್ ಕುಮಾರ್, ಕೃಷ್ಣಭಟ್, ಗುಂಡ್ಲುಪೇಟೆ ಶಾಖೆ ಅಧ್ಯಕ್ಷ ನಾಗರಾಜು, ಎಂ.ಪಿ. ಪ್ರಕಾಶ್, ಚಂದ್ರ, ಗುರುಪ್ರಸಾದ್, ಭಾವನ, ಬಿ.ಎಲ್. ನಾಗೇಂದ್ರ, ನಾಗೇಂದ್ರ ಇದ್ದರು.