ಇನ್ನೂ ಫಲಾನುಭವಿಗಳ ಕೈ ಸೇರದ ಜೂನ್ ಪಡಿತರ

KannadaprabhaNewsNetwork | Published : Jun 17, 2025 12:58 AM

ಪ್ರಫಲಾನುಭವಿ ಪ್ರತಿ ಸದಸ್ಯರಿಗೆ ೫ಕೆಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ೫ಕೆಜಿ ಅಕ್ಕಿ ಸೇರಿ ಒಟ್ಟು ಒಬ್ಬ ಸದಸ್ಯರಿಗೆ ೧೦ಕೆಜಿ ಅಕ್ಕಿಯನ್ನು ಅರ್ಹ ಪಡಿತರ ಚೀಟಿದಾದದರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸುವ ಆಹಾರ ಧಾನ್ಯಗಳು ಪ್ರಸಕ್ತ ಜೂನ್ ತಿಂಗಳು ಅರ್ಧ ಭಾಗ ಕಳೆದಿದ್ದರೂ ಪಡಿತರ ಬಂದಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸಬೇಕಿದ್ದ ಜೂನ್‌ ತಿಂಗಳ ಪಡಿತರ ಆಹಾರ ಧಾನ್ಯಗಳು ಇದುವರೆಗೂ ಫಲಾನುಭವಿಗಳ ಕೈಸೇರದೆ ಬಡವರು ಅಕ್ಕಿಗಾಗಿ ನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುವಂತಾಗಿದೆ.ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ ೫ಕೆಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ೫ಕೆಜಿ ಅಕ್ಕಿ ಸೇರಿ ಒಟ್ಟು ಒಬ್ಬ ಸದಸ್ಯರಿಗೆ ೧೦ಕೆಜಿ ಅಕ್ಕಿಯನ್ನು ಅರ್ಹ ಪಡಿತರ ಚೀಟಿದಾದದರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ವಿತರಿಸುವ ಆಹಾರ ಧಾನ್ಯಗಳು ಪ್ರಸಕ್ತ ಜೂನ್ ತಿಂಗಳು ಅರ್ಧ ಭಾಗ ಕಳೆದಿದ್ದರೂ ಇನ್ನೂ ಗೋದಾಮಿನಿಂದ ಆಹಾರ ಧಾನ್ಯಗಳು ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಲ್ಲ. ಪ್ರತಿ ತಿಂಗಳು ಮೊದಲ ವಾರದಲ್ಲೆ ಎಫ್‌ಸಿಐನಿಂದ ಸಗಟು ಮಳಿಗೆಗಳಿಗೆ ಅಕ್ಕಿ,ರಾಗಿ ಎತ್ತುವಳಿ ಮಾಡಲಾಗುತ್ತಿತ್ತು,ಆನಂತರ ಸಗಟು ಮಳಿಗೆಗಳಿಂದ ಎತ್ತುವಳಿ ಮಾಡುವ ನ್ಯಾಯಬೆಲೆ ಅಂಗಡಿಗಳು ಕಾರ್ಡ್‌ದಾರರಿಗೆ ಪಡಿತರ ವಿತರಿಸಲಾಗುತ್ತಿತ್ತು. ಜೂನ್ ತಿಂಗಳ ೧೭ತಾರೀಕು ಆದರೂ ಇನ್ನೂ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಹಂಚಿಕೆಯಾಗಿಲ್ಲ, ಕೇವಲ ಬೆರಳೆಣಿಕೆಯಷ್ಟು ಅಂಗಡಿಗಳಿಗೆ ಮಾತ್ರ ಸರಬರಾಜು ಮಾಡಲಾಗಿದೆ.

ಸಗಟು ಮಳಿಗೆಗಳಿಂದ ಎತ್ತುವಳಿ ಮಾಡಿದರೂ ಅದನ್ನು ಆದೇಶ ಬರುವತನಕ ಫಲಾನುಭವಿಗಳಿಗೆ ವಿತರಿಸಬಾರದೆಂದು ಇಲಾಖೆ ಅಧಿಕಾರಿಗಳು ಸೂಚಿಸಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮಾಲೀಕರೂ ಎತ್ತುವಳಿಗೆ ಹಿಂದೇಟು ಹಾಕುವಂತಾಗಿದೆ. ಈಗಾಗಲೇ ಎತ್ತುವಳಿ ಮಾಡಿರುವ ಅಂಗಡಿಗಳ ಮಾಲೀಕರು ಆದೇಶಕ್ಕಾಗಿ ಕಾಯುವಂತಾಗಿದೆ.ಇದುವರೆಗೂ ಬರೀ ಅಕ್ಕಿ ಮಾತ್ರ ಹಂಚಿಕೆಯಾಗಿದ್ದರಿಂದ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳು ಸಿಗುತ್ತಿತ್ತು, ಆದರೆ ಈ ಜೂನ್ ತಿಂಗಳಿಂದ ಅಕ್ಕಿ ಜೊತೆ ರಾಗಿ ಸಹ ಹಂಚಿಕೆಯಾಗಿರುವುದರಿಂದ ಹಾಗೂ ರಾಗಿ ಹಂಚಿಕೆಗೆ ಇಲಾಖೆ ಮೇಲಧಿಕಾರಿಗಳು ಇದುವೆರಗೂ ಯಾವುದೇ ಸ್ಪಷ್ಟವಾದ ಸೂಚನೆ ನೀಡದಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಅಂಗಡಿ ಮಾಲೀಕರಿಗೆ ಕಮಿಷನ್‌ ನೀಡಿಲ್ಲ

ಇನ್ನೋಂದು ಕಡೆ ಅನ್ನಭಾಗ್ಯ ಯೋಜನೆಯನ್ನು ಯಾವುದೇ ಲೋಪಗಳಿಲ್ಲದೆ ವಿತರಿಸುವ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸರ್ಕಾರ ನೀಡುವ ಕಮಿಷನ್ ಹಣ ಮೂರು ತಿಂಗಳಿಂದ ಪಾವತಿ ಮಾಡದ ಕಾರಣ ಹಲವು ಮಾಲೀಕರು ತ್ರಿಶಂಕು ಸ್ಥಿತಿಗೆ ತಲುಪುವಂತಾಗಿದೆ. ಜೂನ್ ತಿಂಗಳಲ್ಲಿ ಮಕ್ಕಳ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಶಾಲಾ ಕಾಲೇಜುಗಳ ಶುಲ್ಕ,ಮನೆ ನಿರ್ವಹಣೆ ಹಾಗೂ ಇತರೇ ವೆಚ್ಚಗಳಿಗೆ ಹಣವಿಲ್ಲದೆ ಪರದಾಡುವಂತಾಗಿದೆ.

ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರ ಸೂಚಿಸುವ ಎಲ್ಲಾ ಕೆಲಸಗಳನ್ನು ಮಾಡಿ ಸರ್ಕಾರಕ್ಕೆ ಹೆಸರು ತರುವ ನಮಗೆ ಪ್ರತಿ ತಿಂಗಳು ಕಮಿಷನ್ ಹಣ ಪಾವತಿ ಮಾಡದಿರುವುದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಪಡಿತಕ ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.