ಕಲಬುರಗಿ ಇಬ್ಬರು ಮಕ್ಕಳು ರಾಜ್ಯಕ್ಕೆ 4ನೇ ರ್‍ಯಾಂಕ್‌

KannadaprabhaNewsNetwork |  
Published : Apr 11, 2024, 12:50 AM IST
ಕಲಬುರಗಿಯ ಸರ್ವಜ್ಞ ಪಪೂ ಕಾಲೇಜಿನ ಪ್ರವೀಣ ಹಿರಗೋಪನರ್‌ ಈತ 595 ರ್‍ಯಾಂಕ್‌ ಪಡೆದು ರಾಜ್ಯಕ್ಕೆ 4ನೇ ರ್‍ಯಾಂಕ್‌ ಪಡೆದಿದ್ದರಿಂದ ಕಾಲೇಜಿನ ಮುಖ್ಯಸ್ಥರಾದ ಚೆನ್ನಾರೆಡ್ಡಿಯವರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಪೋಷಕರಾದ ಸಿದ್ದಪ್ಪ ದಂಪತಿ ಇದ್ದರು. | Kannada Prabha

ಸಾರಾಂಶ

ಕಲಬುರಗಿ ನಗರದ ಸರ್ವಜ್ಞ ಕಾಲೇಜಿನ ಪ್ರವೀಣ, ಎಸ್ಬಿಆರ್‌ ಕಾಲೇಜಿನ ಸಮರ್ಥ ಸಾಧಕ ಕಲಬುರಗಿಯ ವಿದ್ಯಾರ್ಥಿಗಳು; ಸರ್ವಜ್ಞ ಕಾಲೇಜಿನ ಪ್ರವೀಣ ನಾಲ್ಕೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಬೆರಗಿನ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪಿಯುಸಿ ಫಲಿತಾಂಶ ಈ ಬಾರಿ ಕಲಬುರಗಿ ಪಾಲಿಗೆ ಸಂತಸ ತಂದಿದೆ. ಕಲಬುರಗಿ ನಗರದಲ್ಲಿರುವ ಸರ್ವಜ್ಞ ಹಾಗೂ ಶರಣಬಸವೇಶ್ವರ ವಸತಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 595 ಅಂಕ ಪಡೆಯುವ ಮೂಲಕ ಜಿಲ್ಲೆಯನ್ನ ರಾಜ್ಯ ರ್‍ಯಾಂಕ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತಲುಪುವಂತೆ ಮಾಡಿದ್ದಾರೆ.

ದಶಕದಿಂದ ಜಿಲ್ಲೆಯ ಹೆಸರು ರಾಜ್ಯ ಟಾಪ್‌ 5, ಟಾಪ್‌ 10ರಲ್ಲಾಗಲಿ ಇರುತ್ತಿರಲಿಲ್ಲ ಆದರೀಗ ಸರ್ವಜ್ಞ ಕಾಲೇಜಿನ ಪ್ರವೀಣ, ಎಸ್ಬಿಆರ್‌ನ ಸಮರ್ಥ ಇ‍ರಿಬ್ಬರ ಸಾಧನೆಯಿಂದಾಗಿ ಇಡೀ ಜಿಲ್ಲೆಯ ಪಿಯು ಫಲಿತಾಂಶದಲ್ಲಿ ರ್‍ಯಾಂಕ್‌ ಸಾದನೆ ಮಾಡುವ ಮೂಲಕ ಹೆಮ್ಮೆಯಿಂದ ಬೀಗುವಂತಾಗಿದೆ.

ಪಿಸಿಎಂಬಿ ನಾಲ್ಕರಲ್ಲೂ ನೂರಕ್ಕೆ ನೂರು ಸಾಧನೆ: ಇಲ್ಲಿನ ಸರ್ವಜ್ಞ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಪ್ರವೀಣ ಹಿರಗೋಪನಾರ್‌ ಈತ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ಎಲ್ಲಾ ನಾಲ್ಕೂ ಮೂಲ ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಸಾಧನೆ ಮಾಡಿ ಗಮನ ಸೆಳೆದಿದ್ದಾನೆ. ಈತನಿಗೆ 600 ಕ್ಕೆ 595 ಬಂದಿದೆ. ಶೇ.99.17ರಷ್ಟು ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.

ಪ್ರವೀಣನದ್ದು ಸಾಧಾರಣ ರೈತ ಕುಟುಂಬವಾಗಿದೆ. ಈತನ ತಂದೆ ಸಿದ್ದಪ್ಪ ಕುಮಸಿ ತಾಂಡಾದ ನಿವಾಸಿ ಹಾಗೂ ರೈತನಾಗಿದ್ದಾನೆ. ಅಷ್ಟೇನು ಓದಿದವನಲ್ಲ, ತಾಯಿ ನಾಗಮ್ಮ ಅನಕ್ಷರಸ್ಥೆ. ಆದಗ್ಯೂ ಮಗ ಓದಲಿ ಎಂದು ಈತನನ್ನು ಪುಣೆಯಲ್ಲಿರುವ ಮಾವನ ಮನೆಯಲ್ಲಿಟ್ಟು ಓದಿಸಿದ್ದಾರೆ. ಇದೀಗ ಪ್ರವೀಣ ಪಿಯುಸಿಯಲ್ಲಿ ಭಾರಿ ಅಂಕ ಗಳಿಸಿ ಪೋಷಕರಿಗೆ ಸಂತಸ ತಂದಿದ್ದಾನೆ.

ಪುಣೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ ನಂತರ ಕಲಬುರಗಿಗೆ ಬಂದು ಸರ್ವಜ್ಞ ಕಾಲೇಜಲ್ಲಿ ಪ್ರವೇಶ ಪಡೆದೆ. ಈ ಕಾಲೇಜಲ್ಲಿ ಶಉಲ್ಕ ಕಮ್ಮಿ ಹಾಗೂ ಉತ್ತಮ ಓದಿನ ವಾತಾವರಣವಿತ್ತು. ಇದೇ ನನಗೆ ಸಾದನೆ ಮಾಡಲು ಅನುಕೂಲವಾಯ್ತು. ಎಸ್ಸೆಸ್ಸೆಲ್ಸಿಯಲ್ಲಿ ನಾವು ಶೇ. 88 ರಷ್ಟು ಮಾತ್ರ ಸಾಧನೆ ಮಾಡಿದವ, ಆದರೆ ಪಿಯುಸಿಯಲ್ಲಿ ಶೇ. 99 ಸಾಧನೆ ಮಾಡಿ ರ್‍ಯಾಂಕ್‌ ಬಂದಿರುವೆ. ಇದಕ್ಕೆಲ್ಲ ಸರ್ವಜ್ಞ ಕಾಲೇಜಿನ ಬೋಧಕ ಸಿಬ್ಬಂದಿ, ಮಾರ್ಗದಸ್ಱಕರಾದ ಚೆನ್ನಾರೆಡ್ಡಿ ಸರ್‌ ಅವರೇ ಕಾರಣ ಎಂದು ಪ್ರವೀಣ ತನ್ನ ಅಭಿಪ್ರಾಯ ಹಂಚಿಕೊಂಡ.

ಪಿಯುಸಿ 2ನೇ ವರ್ಷಪೂರ್ತಿ ಮೊಬೈಲ್‌ನಿಂದ ದೂರ: ಪ್ರವೀಣನ ಸಾಧನೆಯ ಹಿಂದೆ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಆತ ಪಿಯುಸಿ 2 ವರ್ಷ ಪೂರ್ತಿ ಮೊಬೈಲ್‌ನಿಂದ ದೂರ ಇದ್ದದ್ದು. ಈತ ಮೊಬೈಲ್‌ ತನ್ನ ಜೊತೆ ಇಟ್ಟು ಕೊಂಡೇ ಇರಲಿಲ್ಲವಂತೆ, ಹೀಗೆಂದು ಆತನ ಸಹಪಾಠಿಗಳೇ ಹೇಳುತ್ತಾರೆ. ಮನಗೆ ಕರೆ ಮಾಡಬೇಕಾದರೆ ಅವರಿವರು ಸ್ನೇಹಿತರ ಮೊಬೈಲ್‌ ಪಡೆಯುತ್ತಿದ್ದ ಪ್ರವೀಣ ತನಗೆ ಮೊಬೈಲ್‌ ಬೇಕು ಅನ್ನಿಸಲೇ ಇಲ್ಲವೆಂದು ಹೇಳಿದ.

ಕಾಲೇಜಲ್ಲಿ ರಾತ್ರಿ ಓದಿನ ಸಮಯವೆಂದು 11 ಗಂಟೆವರೆಗೆ ಇರುತ್ತಿದ್ದೆ, ನಂತರ ಸಹಪಾಠಿಗಳೊಂದಿಗೆ ಚರ್ಚೆ ಮಾಡುತ್ತಿದ್ದೆ. ಮೊಬೈಲ್‌ ನೋಡಲು ಸಮಯವೇ ಇರುತ್ತಿರಲಿಲ್ಲವೆಂದು ಪ್ರವೀಣ ಹೇಳುತ್ತಾನೆ. ಮಗನ ಸಾಧನೆಗೆ ಪೋಷಕರಾದ ಸಿದ್ದಪ್ಪ, ನಾಗಮ್ಮ ಸಂತಸದಲ್ಲಿದ್ದಾರೆ. ಮಗನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಸರ್ವಜ್ಞ ಕಾಲೇಜಿನ ಮುಖ್ಯಸ್ಥರಾದ ಚೆನ್ನಾರೆಡ್ಡಿಯವರು ತಮಗೆ ಮಾಡಿದ ನೆರವಿಗೆ ಕೃತಜ್ಞತೆ ಸಲ್ಲಿಸಿದರು.

ಎಸ್ಬಿಆರ್‌ ಸಮರ್ಥನ ಸಾಧನೆಗೆ ಹೆಮ್ಮೆ: ಇಲ್ಲಿನ ಶರಣಬಸವೇಶ್ವರ ರೆಸಿಡೆನ್ಸಿಯಲ್‌ ಕಾಲೇಜು ಎಸ್ಬಿಆರ್‌ನ ಸಮರ್ಥ ಭಕರೆ ರಾಜ್ಯಕ್ಕೆ 4ನೇ ರ್‍ಯಾಂಕ್‌ ಗಳಿಸಿದ್ದಾನೆ. ಈತನ ತಂದೆ ಸೂರಜ್‌ ಭಕರೆ ಸುರಪೂರ ಡಿಪ್ಲೊಮಾ ಕಾಲೇಜಿನ ಉಪನ್ಯಾಸಕರು, ತಾಯಿ ಅನಿತಾ ಇವರು ಅಫಜಲ್ಪುರದಲ್ಲಿ ಸರಕಾರಿ ಪಪೂ ಗಣಿತ ಉಪನ್ಯಾಸಕಿಯಾಗಿದ್ದಾರೆ.

ಮೇಹ್ತಾ ಶಾಲೆಯಲ್ಲಿ ಹೈಸ್ಕೂಲ್‌ ಓದಿರುವ ಸಮರ್ಥ ಪಿಯುಸಿಗೆ ಎಸ್ಬಿಆರ್‌ ಸೇರಿದವ. ಇಲ್ಲೀಗ ಹೆಚ್ಚಿನ ಅಂಕ ಪಡೆದು ರಾಜ್ಯಕ್ಕೇ 4ನೇ ರ್‍ಯಾಂಕ್‌ ಪಡೆದಿದ್ದಾನೆ. 600 ಅಂಕಗಳ ಪೈಕಿ 595 ಅಂಕ ಪಡೆದಿರುವ ಸಮರ್ಥ ಮೂಲ ವಿಜ್ಞಾನದ 2 ವಿಷಯಗಳಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ್ದಾನೆ. ಆ ಮೂಲಕ ಕಾಲೇಜು ಕೀರ್ತಿ ಪತಾಕೆ ಹಾರಿಸಿದ್ದಾನೆಂದು ಈತನ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸಂತೋಷಪಟ್ಟಿದ್ದಾರೆ.

ನಿತ್ಯ ಮೂರೂವರೆ ಗಂಟೆ ಓದುತ್ತಿದ್ದೆ. ಇದಲ್ಲದೆ ಕಾಲೇಜಲ್ಲಿ ನಿತ್ಯ ನಡೆಸುವ ಕಿರು ಪರೀಕ್ಷೆಗಳೇ ನನ್ನ ಸಾಧನೆಗೆ ಪೂರಕ. ಜೊತೆಗೇ ಉಪನ್ಯಾಸಕರ ಸಲಹೆ ಸೂಚನೆ ಪಾಲಿಸುತ್ತ ಓದಿದ್ದೇ ತನ್ನ ಯಶಸ್ಸಿಗೆ ಕಾರಣವೆಂದು ಸಮರ್ಥ ಹೇಳುತ್ತಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್