ಮಾಡುವ ಕೆಲಸದಲ್ಲಿ ಸೇವಾ ಭಾವ ಹೊಂದಿರುವುದೇ ದೇಶ ಸೇವೆ

KannadaprabhaNewsNetwork | Published : Jan 12, 2025 1:16 AM

ಸಾರಾಂಶ

ಯಾವುದೇ ದೇಶಗಳು ಸಹಕಾರ ನೀಡದ ಸಮಯದಲ್ಲಿ ಭಾರತೀಯರು ಸಾಧಿಸಿದ್ದು ಹೆಮ್ಮೆಯ ವಿಚಾ

ಕನ್ನಡಪ್ರಭ ವಾರ್ತೆ ಮೈಸೂರುನಾವು ಮಾಡುವ ಕೆಲಸದಲ್ಲಿ ಸೇವಾ ಮನೋಭಾವ ಹೊಂದಿರುವುದೇ ದೇಶ ಸೇವೆ ಎಂದು ಡಿಆರ್ ಡಿಒ ಮಾಜಿ ನಿರ್ದೇಶಕ ಡಾ.ಕೆ. ರಾಧಾಕೃಷ್ಣ ತಿಳಿಸಿದರು.ನಗರದ ಕಲಾಮಂದಿರದಲ್ಲಿ ವಿಶ್ವೇಶ್ವರಯ್ಯ ಡೆವಲಪ್ ಮೆಂಟ್ ಆರ್ಗನೈಜೇಷನ್ ಶನಿವಾರ ಆಯೋಜಿಸಿದ್ದ ಲಾಲ್ ಬಹದ್ದೂರ್ ಜೈ ಜವಾನ್ ಜೈ ಕಿಸಾನ್ ದಿವಸ್, ರಾಷ್ಟ್ರ ರಕ್ಷಾ ಸಮ್ಮಾನ್ ಹಾಗೂ ಕೃಷಿ ಸಮ್ಮಾನ್ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಡಿಆರ್ ಡಿಒ ಸಂಸ್ಥೆಯಲ್ಲಿ ನಾನು ಕೆಲಸ ನಿರ್ವಹಿಸುವಾಗ ರಾಷ್ಟ್ರದ ಹಿತಕ್ಕಾಗಿ ಅಸಾಧ್ಯ ಎನಿಸುವ ಸವಾಲುಗಳನ್ನು ಸಾಧ್ಯವಾಗಿಸಿದ್ದೇವೆ. ಅಗ್ನಿ ಕ್ಷಿಪಣಿ ಕೆಲಸವು ಸವಾಲಿನ ಕೆಲಸವಾಗಿತ್ತು. ಯಾವುದೇ ದೇಶಗಳು ಸಹಕಾರ ನೀಡದ ಸಮಯದಲ್ಲಿ ಭಾರತೀಯರು ಸಾಧಿಸಿದ್ದು ಹೆಮ್ಮೆಯ ವಿಚಾರ ಎಂದರು.ಸೇನೆಗಾಗಿ ಬ್ಲಾಸ್ಟ್ ಡೋರ್ ನಿರ್ಮಿಸಬೇಕೆಂದು ಸೂಚಿಸಿದ್ದರು. ಅದನ್ನು ರಚಿಸಲು ವಿದೇಶದಿಂದ ಸರಕು ತರಿಸಬೇಕಾಗಿತ್ತು. ದೇಶದ ಗೌಪ್ಯ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕಾದ ಸಂದಿಗ್ಥತೆಯಿತ್ತು. ನಂತರ ಭಾರತದಲ್ಲೇ ಸರಕುಗಳನ್ನು ಉತ್ಪಾದಿಸಲಾಯಿತು. ಈಗ ಯಾವುದೇ ಗಾತ್ರದ ಬ್ಲಾಸ್ಟ್ ಡೋರ್ ರಚಿಸಬೇಕಿದ್ದರೂ ನಮ್ಮಲ್ಲೇ ಸರಕುಗಳಿವೆ. ಅನಿವಾರ್ಯ ಸಂದರ್ಭದಲ್ಲಿ ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಈ ಘಟನೆಯಿಂದ ಕಲಿತೆ ಎಂದು ಅವರು ವಿವರಿಸಿದರು.ಕೊರೋನಾ ಮೊದಲ ಹಂತದಲ್ಲಿ ತಕ್ಷಣವೇ ಕೋವಿಡ್ ಆಸ್ಪತ್ರೆ ನಿರ್ಮಿಸಬೇಕೆಂದು ಗೃಹ ಇಲಾಖೆ ಸೂಚಿಸಿತ್ತು. ನಮಗೆ ಆಸ್ಪತ್ರೆಯ ವಿನ್ಯಾಸದ ಬಗ್ಗೆ ಮಾಹಿತಿ ಇರಲಿಲ್ಲ. ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲವೇ ದಿನಗಳಲ್ಲಿ ಜರ್ಮನ್ ಟೆಂಟ್ ಬಳಸಿ ದೆಹಲಿ, ಪಾಟ್ನಾ, ಮುಜಾಫರ್ ನಗರದಲ್ಲಿ ಆಸ್ಪತ್ರೆ ನಿರ್ಮಿಸಿದ್ದೇವು. ಕೊರೋನಾ ಕಡಿಮೆಯಾಗುತ್ತಿದ್ದಂತೆ ಅದನ್ನು ಕಳಚಿದೇವು. ಆದರೆ, ಕೊರೋನಾ 2ನೇ ಹಂತದಲ್ಲಿ ಕೇವಲ 4 ದಿನದಲ್ಲಿ 250 ಬೆಡ್ ವ್ಯವಸ್ಥೆಯುಳ್ಳ ಆಸ್ಪತ್ರೆ ನಿರ್ಮಿಸಿದ್ದೇವು ಎಂದು ಅವರು ಸ್ಮರಿಸಿದರು.ಇದೇ ವೇಳೆ ಕೃಷಿಕರಾದ ಬಿ. ರಾಧಾಕೃಷ್ಣ, ಪಿ. ದಯಾನಂದ, ವಿ. ಮುರಳಿ, ಆರ್. ಶೇಷಕುಮಾರ್ ಮತ್ತು ಪಾರ್ವತಿ ಫ್ಯಾನ್ಸಿ ಗಣಪತಿ ಅವರಿಗೆ ಕೃಷಿ ಸಮ್ಮಾನ್ ಪುರಸ್ಕಾರ- ಪ್ರಶಸ್ತಿ ಪ್ರದಾನ ಮಾಡಲಾಯಿತು.ಭಾರತೀಯ ಸೇನೆಯ ನಿವೃತ್ತ ಯೋಧರಾದ ಅರುಣ್ ಜಗನ್ನಾಥ ರಾವ್, ಜಿ. ಕುಮಾರಸ್ವಾಮಿ, ಸಿ.ಎಂ. ಶ್ರೀಧರ್, ಬಿ.ಕೆ. ಮಹದೇವಮೂರ್ತಿ, ಸಿ. ಕುಪ್ಪಸ್ವಾಮಿ, ಕೆ. ಗೋವಿಂದರಾಜು, ಕೆ.ಪಿ. ಹರೀಶ್, ಆರ್. ರಂಜಿತಾ, ಆರ್ಗನೈಜೇಷನ್ ಅಧ್ಯಕ್ಷ ಎಲ್. ಶಿವಪ್ರಸಾದ್, ಕಾರ್ಯದರ್ಶಿ ಕೆ. ಗಣೇಶ್, ಖಜಾಂಚಿ ಎಂ. ಕುಮಾರ್ ಹಾಗೂ ನಿರ್ದೇಶಕರು ಇದ್ದರು.

Share this article