ಸಚಿವ ಸಂತೋಷ ಲಾಡ್ ಅವರಿಂದ ಕಲಘಟಗಿ ಜನರ ಬಹುದಿನಗಳ ತಾಲೂಕು ಕ್ರೀಡಾಂಗಣದ ಕನಸು ಸಾಕಾರಗೊಂಡಿದೆ. ಆದಷ್ಟು ಶೀಘ್ರ ಈ ಕ್ರೀಡಾಂಗಣದ ಕಾಮಗಾರಿ ಪ್ರಾರಂಭಗೊಂಡು ತಾಲೂಕು ಕ್ರೀಡಾಂಗಣ ಲೋಕಾರ್ಪಣೆಗೊಳ್ಳಲಿದೆ.
ಕಲಘಟಗಿ:
ಪಟ್ಟಣದ ವ್ಯಾಪ್ತಿಯಲ್ಲಿಯೇ ಕ್ರೀಡಾಂಗಣ ಸಿದ್ಧವಾಗಬೇಕು ಎಂದು ಸಾಕಷ್ಟು ಹೋರಾಟಗಳ ನಂತರ ಕಾರ್ಮಿಕ ಸಚಿವ ಸಂತೋಷ ಲಾಡ್ ಸಹಕಾರದಿಂದ ತಾಲೂಕು ಕ್ರೀಡಾಂಗಣ ಭಾಗ್ಯ ಒಲಿದು ಬಂದಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಹೇಳಿದರು.
ಪಟ್ಟಣದ ಉಪನೋಂದನಾಧಿಕಾರಿ ಕಚೇರಿಯಲ್ಲಿ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಸುಪರ್ದಿಯಲ್ಲಿದ್ದ 4 ಎಕರೆ ಜಾಗವನ್ನು ಅಧಿಕೃತವಾಗಿ ಧಾರವಾಡದ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ವೇ ನಂ. 73/1ಬ ನಲ್ಲಿನ 3 ಎಕರೆ 12 ಗುಂಟೆ ಜಾಗ ಮತ್ತು ಸರ್ವೇ ನಂ. 62ರ 28 ಗುಂಟೆ ಒಟ್ಟು 4 ಎಕರೆ ಜಾಗವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸುಪರ್ದಿಯಲ್ಲಿದ್ದ ಈ ಜಾಗೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಕ್ರಯ ಪತ್ರಕ್ಕೆ ಸಹಿ ಮಾಡಿಸಲಾಯಿತು.
ಸಚಿವರ ಆಪ್ತ ಸಹಾಯಕ ಹರಿಶಂಕರ್ ಮಠದ ಮಾತನಾಡಿ, ಸಚಿವರಿಂದ ಕಲಘಟಗಿ ಜನರ ಬಹುದಿನಗಳ ತಾಲೂಕು ಕ್ರೀಡಾಂಗಣದ ಕನಸು ಸಾಕಾರಗೊಂಡಿದೆ. ಆದಷ್ಟು ಶೀಘ್ರ ಈ ಕ್ರೀಡಾಂಗಣದ ಕಾಮಗಾರಿ ಪ್ರಾರಂಭಗೊಂಡು ತಾಲೂಕು ಕ್ರೀಡಾಂಗಣ ಲೋಕಾರ್ಪಣೆಗೊಳ್ಳಲಿದೆ ಎಂದರು.
ಈ ವೇಳೆ ತಾಲೂಕು ಸ್ಪೋರ್ಟ್ಸ್ ಕ್ಲಬ್ನ ಆಯತ್ ಜಹಗಿರದಾರ, ಎಸ್.ಆರ್. ಪಾಟೀಲ, ಬಾಬು ಅಂಚಟಗೇರಿ, ಬಾಳು ಖಾನಾಪುರ, ಕುಮಾರ ಖಂಡೇಕರ, ಗಿರೀಶ ಸೂರ್ಯವಂಶಿ, ಪ್ರವೀಣ ಸೂರ್ಯವಂಶಿ, ಉಮೇಶ ಹರಿಜನ, ಕಿರಣ ಬೊರಗಲ್, ಮುಜಾಮಿಲ್ ಮಕಾಂದಾರ, ದಿನೇಶ ಲಮಾಣಿ ಹಾಗೂ ಸಾರಿಗೆ ಸಂಸ್ಥೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.