ಕನ್ನಡಪ್ರಭ ವಾರ್ತೆ ಬೆಳಗಾವಿ
ದಾಸ ಸಾಹಿತ್ಯದ ಮೂಲಕ ಕನಕದಾಸರು ಆಧ್ಯಾತ್ಮಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ಹೇಳಿದರು.ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ ಜರುಗಿದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕದಾಸರ ಕೊಡುಗೆ ಅಪಾರವಾದುದು. ಕನಕದಾಸರ ಜಯಂತಿಯನ್ನು ಭಕ್ತಿಪೂರ್ವಕ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು.
ಸಿದ್ಧಯೋಗಿ ಅಮರೇಶ್ವರ ಅಪ್ಪಾಜಿ ಮಾತನಾಡಿ, ಭಕ್ತಿ ಎನ್ನುವುದು ಆಡಂಬರವಾಗದೇ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಜೀವನದ ಕಾಳಜಿ ವಹಿಸುವ ದಾಸರಾಗಿ ಎಂದು ಹೇಳಿದರು.ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಅರಿವು ಮೂಡಿಸಲು ಯತ್ನಿಸಿ 15-16ನೇ ಶತಮಾನದಲ್ಲಿ ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದುಹಾಕಲು ಶ್ರಮಿಸಿದರು. ಕಾಗಿನೆಲೆಯ ಆದಿಕೇಶವರಾಯ ಅಂಕಿತದ ಮೂಲಕ ಕೀರ್ತನೆಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದರು. ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ಕರ್ನಾಟಕ ಸಂಗೀತದ ಮೂಲ ಸಿದ್ಧಾಂತಗಳಿಗೆ ಪುರಂದರ ದಾಸರೊಂದಿಗೆ ಕಾಣಿಕೆ ನೀಡಿದ್ದಾರೆ. ಕನಕದಾಸರು ಮೂಲತಃ ದಂಡನಾಯಕರಾಗಿದ್ದರು. ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾದರು ಎಂದು ಹೇಳಲಾಗುತ್ತದೆ.
ಕನಕದಾಸರು ಸಮಾನತೆಯ ಸಂದೇಶ ಹರಡುವಲ್ಲಿ ಮತ್ತು ಸಾಮಾಜಿಕ ಸಮುದಾಯ ಉನ್ನತೀಕರಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದರು. ಕನಕದಾಸರು ಸರಳ ಬರಹಗಳು ಮತ್ತು ರಚನೆಗಳ ಮೂಲಕ ಜನಪ್ರಿಯತೆ ಗಳಿಸಿದರು, ಅವರ ಸಾಹಿತ್ಯಿಕ ಬರಹಗಳ ಮೂಲಕ ಜನಸಾಮಾನ್ಯರ ದೈನಂದಿನ ಚಟುವಟಿಕೆ ಬಳಸಿಕೊಂಡು ಹೊಸತನ ತೋರಿಸಿದರು. ಈ ಕಾರಣಕ್ಕೆ ಕನಕದಾಸರು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.ಕನಕದಾಸರ ಬೋಧನೆ ಸಾಕಾರಗೊಳಿಸುವ ಮೂಲಕ ಮತ್ತು ಅವರ ಸಾಹಿತ್ಯಿಕ ಕೊಡುಗೆ ಗೌರವಿಸುವ ಮೂಲಕ ಅವರ ಬೋಧನೆಗಳು ಸಾಮರಸ್ಯ ಮತ್ತು ಸಹಾನುಭೂತಿಯ ಅಸ್ತಿತ್ವದ ಕಡೆಗೆ ನಮಗೆ ಮಾರ್ಗದರ್ಶನ ನೀಡಲಿ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ ಸದಲಗಿ, ಸೇಲ್ಸ್ ಟ್ಯಾಕ್ಸ್ ಅಸಿಸ್ಟಂಟ್ ಕಮಿಷನರ್ ಸುಂಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನೀರ್ದೇಶಕಿ ವಿದ್ಯಾವತಿ ಭಂಜತ್ರಿ, ಮಾಜಿ ಮಹಾಪೌರ ಯಲ್ಲಪ್ಪ ಕುರುಬರ , ಪ್ರಕಾಶ ಪೂಜೇರಿ, ರೇಖಾ ದಳವಾಯಿ, ಎಸ್.ಟಿ. ಸಾಬನ್ನವರ, ಡಾ.ಪ್ರತಾಪ ಕುಮಾರ ಸೇರಿದಂತೆ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.ಭಾವಚಿತ್ರದ ಭವ್ಯ ಮೆರವಣಿಗೆ:
ಕಾರ್ಯಕ್ರಮಕ್ಕೂ ಮುನ್ನ ನಗರದ ಕನಕ ವೃತ್ತದಿಂದ ಪ್ರಾರಂಭವಾದ ಆಕರ್ಷಕ ಮೆರವಣಿಗೆಗೆ ಶಾಸಕ ಆಸೀಫ್ (ರಾಜು) ಸೇಠ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾಪೌರ ಸವಿತಾ ಕಾಂಬಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ ಸೇರಿದಂತೆ ಸಮುದಾಯದ ಗಣ್ಯರು, ಮುಖಂಡರು ಸಾರ್ವಜನಿಕರು ಇದ್ದರು.