ಯಲ್ಲಾಪುರ: ಹಿರಿಯ ಯಕ್ಷಗಾನ ಕಲಾವಿದ ಮಹಾಬಲೇಶ್ವರ ಗಾಂವ್ಕರ ಬಿದ್ರೆಮನೆ ಅವರ ಸಹಸ್ರಚಂದ್ರ ದರ್ಶನ ಶಾಂತಿಯ ಪ್ರಯುಕ್ತ ಕಲಾ ಸಾಧಕರಿಗೆ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಕನಕನಹಳ್ಳಿಯ ಯಕ್ಷಶ್ರೀ ಆವಾರದಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿದ ಶ್ರೀಧರ ಹೆಗಡೆ ಚಪ್ಪರಮನೆ ಮಾತನಾಡಿ, ಶ್ರದ್ಧೆ, ಪರಿಶ್ರಮದ ಜೊತೆಗೆ ಔಚಿತ್ಯ ಮೀರದ ಪಾತ್ರ ನಿರ್ವಹಣೆ ಕಲಾವಿದರಿಂದ ಆಗಬೇಕು. ಯಕ್ಷಗಾನದಲ್ಲಿ ಕಲಾವಿದರನ್ನು ಅಪಸ್ಯವಗಳು ಉಂಟಾದಾಗ ಕಲಾಭಿಮಾನಿಗಳು ಎದ್ದು ನಿಂತು ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಕಲೆ ನೈಜತೆಯನ್ನು ಕಳೆದುಕೊಳ್ಳುವುದಿಲ್ಲ ಎಂದರು.
ಶಿರಸಿ ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ, ಹಿರಿಯ ಕಲಾವಿದ ಗಣಪತಿ ಭಾಗ್ವತ ಕವಾಳೆ, ಸನ್ಮಾನ ಸ್ವೀಕರಿಸಿ ಕೃಷ್ಣ ಭಾಗ್ವತ ಹರಿಮನೆ, ರವೀಂದ್ರ ಭಟ್ಟ ಅಚವೆ ಮಾತನಾಡಿದರು.ಸಂಘಟಕ ಭಾಸ್ಕರ ಗಾಂವ್ಕರ ಬಿದ್ರೆಮನೆ ಪ್ರಾಸ್ತಾವಿಕ ಮಾತನಾಡಿದರು. ಶಿವರಾಮ ಗಾಂವ್ಕರ ಕನಕನಹಳ್ಳಿ ನಿರ್ವಹಿಸಿ, ಸನ್ಮಾನಿತರನ್ನು ಪರಿಚಯಿಸಿದರು. ರಾಮಕೃಷ್ಣ ಹರಿಮನೆ, ವಿ.ಟಿ.ಭಟ್ಟ ಸನ್ಮಾನಪತ್ರ ವಾಚಿಸಿದರು.
ಕನಕನಹಳ್ಳಿ ಯಕ್ಷಶ್ರೀ ಆವಾರದಲ್ಲಿ ಕಲಾಸಾಧಕರನ್ನು ಸನ್ಮಾನಿಸಲಾಯಿತು.