ಕನ್ನಡ ನಮ್ಮ ಸಂಸ್ಕೃತಿಯ ಅಡಿಪಾಯ: ಸಾಹಿತಿ ರೋಷನ್ ನೇತ್ರಾವಳಿ

KannadaprabhaNewsNetwork |  
Published : Sep 01, 2025, 01:04 AM IST
ಎಚ್‌31.8-ಡಿಎನ್‌ಡಿ1: ಕಸಾಪದಿಂದ ಭಾವತರಂಗ ಭಾವಗೀತೆಗಳ ಗಾಯನ ಕಾರ್ಯಕ್ರಮದ ಚಿತ್ರ. | Kannada Prabha

ಸಾರಾಂಶ

ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಸಂಸ್ಕೃತಿಯ ಅಡಿಪಾಯ.

ದಾಂಡೇಲಿ: ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಸಂಸ್ಕೃತಿಯ ಅಡಿಪಾಯ. ನಮ್ಮ ಭಾವನೆಗಳ ಅಭಿವ್ಯಕ್ತಿ, ನಮ್ಮ ಆದ್ಯತೆಯ ಗುರುತು. ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು ಆಗಿರುವ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಸಾಹಿತಿ ರೋಷನ್ ನೇತ್ರಾವಳಿ ಹೇಳಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತ ತಾಲೂಕ ಘಟಕ ದಾಂಡೇಲಿ ಅವರ ತಿಂಗಳುವಾರು ಸಾಹಿತ್ಯ ಸರಣಿ ಕಾರ್ಯಕ್ರಮದ ಭಾವ ತರಂಗ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಮಣ್ಣಿನ ನಾಡಗುಣ, ನಡತೆ, ಸಂಸ್ಕೃತಿ, ಸಂವೇದನೆಗಳು ಎಲ್ಲವನ್ನೂ ಒಳಗೊಂಡಿದೆ. ನಮ್ಮ ನಿತ್ಯಜೀವನದಲ್ಲಿ ಬಳಸುವ ಕನ್ನಡಕ್ಕೆ ಗೌರವ ಕೊಡುವುದು, ಅದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂದು ಇಂಗ್ಲಿಷ್, ಹಿಂದಿ, ಇತರ ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ. ಆದರೆ ಅದಕ್ಕಾಗಿ ಕನ್ನಡವನ್ನು ಕಡೆಗಣಿಸುವಂತಿಲ್ಲ. ಮೊದಲಿಗೆ ಕನ್ನಡದಲ್ಲೇ ಕನಸು ಕಾಣಬೇಕು, ಯೋಚಿಸಬೇಕು. ನಂತರ ಬೇರೆಯದ್ದನ್ನೂ ಅರಗಿಸಿಕೊಳ್ಳಬೇಕು. ನಮ್ಮ ಭಾಷೆ ನಮ್ಮ ಹೆಮ್ಮೆ ಎಂಬ ನಂಬಿಕೆಯಿಂದ ನಮ್ಮ ಮನೆಯಲ್ಲೂ, ಶಾಲೆಯಲ್ಲೂ, ಸಮಾಜದಲ್ಲೂ ಕನ್ನಡ ಭಾಷೆಯ ಬಳಕೆ ಹೆಚ್ಚಿಸಿ, ಮುಂದಿನ ಪೀಳಿಗೆಗೂ ಕನ್ನಡದ ಮಹತ್ವ ತಿಳಿಯುವಂತೆ ಮಾಡೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವ ಈ ಭಾವಗೀತೆಗಳು ಸೂಕ್ಷ್ಮ ಮತ್ತು ಆಳವಾದ ಅರ್ಥವಿರುವ ಗೀತೆಗಳು. ಹಾಡುಗಳು ಸಾಮಾನ್ಯವಾಗಿ ದೇಶಭಕ್ತಿ, ನಾಡು, ಭಾಷೆ, ಪ್ರಕೃತಿ, ಪ್ರೇಮ, ವಿರಹ, ಪರಿಸರ ಪ್ರೀತಿ ಮಾನವೀಯತೆ, ಸಾಂಸ್ಕೃತಿಕ ಮೌಲ್ಯಗಳು ಮುಂತಾದ ವಿಷಯಗಳನ್ನು ಆಳವಾಗಿ ಸ್ಪರ್ಶಿಸುತ್ತವೆ. ಭಾವಗೀತೆಗಳು ಕನ್ನಡಿಗರಲ್ಲಿ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದಲ್ಲದೆ, ಜನರ ಹೃದಯದಲ್ಲಿ ಭಾಷೆ ಬೇರೂರಲು ಸಹಾಯ ಮಾಡುತ್ತವೆ. ಭಾವಗೀತೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ, ದಾಂಡೇಲಿ ಘಟಕದ ಅಧ್ಯಕ್ಷ ಮಹೇಶ್ ಆದಿವಾಸಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾಹುಸೇನ್ ಆನೆಹೊಸೂರ ಮಾತನಾಡಿದರು.

ಕಾರ್ಯಕ್ರಮದ ದಾಸೋಹಿ ಜಯದೇವ ಸಿರಿಗೇರಿ ಕನ್ನಡ ಭಾಷೆ ನನ್ನ ಜೀವನ ರೂಪಿಸಿದೆ. ಕನ್ನಡ ಭಾಷೆಗೆ ಯಾವತ್ತು ಋಣಿಯಾಗಿರುತ್ತೇನೆ. ಕನ್ನಡ ಭಾಷೆ ನನ್ನ ಮಾತೃ-ಪಿತೃ ಇದ್ದಂತೆ. ನನಗೆ ಜನ್ಮ ನೀಡಿದ ತಂದೆ ಮಲ್ಲಿಕಾರ್ಜುನಪ್ಪ ಸಿರಿಗೇರಿ. ತಾಯಿ ನಾಗರತ್ನಮ್ಮ ಇವರ ಹೆಸರಿನಲ್ಲಿ ಈ ಕಾರ್ಯಕ್ರಮದ ದಾಸೋಹಿಗಳಾಗಿ ಸೇವೆ ಸಲ್ಲಿಸಲು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ನಾನು ಆಭಾರಿಯಾಗಿದ್ದು, ಮುಂದೆಯೂ ಕನ್ನಡಪರ ಕಾರ್ಯಕ್ರಮಗಳ ಸೇವೆಗೆ ಸದಾ ಸಿದ್ಧ ಎಂದರು.

ದಾಂಡೇಲಿ ತಾಲೂಕು ಕಸಾಪದಿಂದ ಕಾರ್ಯಕ್ರಮದ ದಾಸೋಹಿಗಳ ಪುತ್ರ ಜಯದೇವ ಸಿರಿಗೇರಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಭಾವಗೀತೆ ಗಾಯನದಲ್ಲಿ ಶಮಿತ ದೇವಿದಾಸ ನಾಯ್ಕ ಮುನಿಸು ತರವೇ ಮುಗುದೇ ಸ್ನೇಹಾ ಪಿಳ್ಳೆ ಅಮ್ಮ ನಿನ್ನ ಎದೆಯಾಳದಲ್ಲಿ, ಸಂಜೀವಿನಿ ನಾಯ್ಕ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಖುಷಿ ಬಾವಿಕಟ್ಟಿ ಹೇಗೆ ನಿನ್ನ ಹುಡುಕಲಿ, ಅದಿತಿ ಗೌಡ ಅಂತರಂಗದ ಮೃದಂಗ, ಭೂಮಿಕಾ ಪೂಜಾರಿ ಲೋಕದ ಕಣ್ಣಿಗೆ ರಾಧೆಯು ಕೂಡ, ಶ್ರೇಯಾ ಕುಂಬಾರ ಮುಗಿಲ ಮಾರಿಗೆ, ವಿನೋದ ಕಾಳೆ ಬಡವನಾದರೆ ಏನು ಪ್ರಿಯೆ, ಪರಸಪ್ಪ ಮಾಕನವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದ ಭಾವಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಕುರ್ಡೇಕರ, ಎಸ್.ಎಸ್.ಪೂಜಾರ, ಎಂ.ಆರ್. ನಾಯಕ, ಬಾಬು ಜರಿ, ಉಜ್ವಲ ಸದಲಗಿ, ಶೋಭಾ ಮುದ್ದಪ್ಪನವರ, ಸಂಗೀತ ಶಿಕ್ಷಕಿ ಶಶಿಕಲಾ ಭಟ್, ಕಸಾಪ ಸದಸ್ಯ ವೆಂಕಮ್ಮ ಗಾವಂಕರ, ಕಲ್ಪನಾ ಪಾಟೀಲ ಮುಂತಾದವರಿದ್ದರು.

ವರ್ಷಾ ಎಸ್. ಹಿರೇಮಠ ಪ್ರಾರ್ಥಿಸಿದರು. ಬಸವರಾಜ ನರಸಪ್ಪನವರ ಸ್ವಾಗತಿಸಿದರು. ಆಶಾ ದೇಶಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಬೀರಪ್ಪ ಬಸಾಪುರಿ ನಿರೂಪಿಸಿದರು. ಕೊನೆಯಲ್ಲಿ ಕಸಾಪ ಖಜಾಂಚಿ ಶ್ರೀಮಂತ ಮದರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!