ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ

KannadaprabhaNewsNetwork | Published : Oct 7, 2024 1:33 AM

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಕೊಲ್ಹಾರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಹಾಗೂ ಕರವೇ ಅವಳಿ ಜಿಲ್ಲೆ ಉಸ್ತುವಾರಿ ಸುರೇಶ ಹಾರಿವಾಳ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ದಿಗಂಬರೇಶ್ವರ ಮಠದಿಂದ ಆರಂಭವಾಗಿ ಬಸವೇಶ್ವರ ವೃತ್ತದವರೆಗೆ ಸಾಗಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಕೊಲ್ಹಾರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಹಾಗೂ ಕರವೇ ಅವಳಿ ಜಿಲ್ಲೆ ಉಸ್ತುವಾರಿ ಸುರೇಶ ಹಾರಿವಾಳ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ದಿಗಂಬರೇಶ್ವರ ಮಠದಿಂದ ಆರಂಭವಾಗಿ ಬಸವೇಶ್ವರ ವೃತ್ತದವರೆಗೆ ಸಾಗಿತು. ಈ ವೇಳೆ ರಸ್ತೆಯ ಅಕ್ಕಪಕ್ಕದಲ್ಲಿನ ಅನ್ಯ ಭಾಷಾ ನಾಮ ಫಲಕಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಸುರೇಶ ಹಾರಿವಾಳ ಮಾತನಾಡಿ, ನಾರಾಯಣಗೌಡ್ರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಡಿ.27 ರಂದು ನಡೆದ ಹೋರಾಟದ ಪ್ರತಿ ಫಲವಾಗಿ ಇಂದು ರಾಜ್ಯಾಧ್ಯಂತ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಕೊಲ್ಹಾರ ತಾಲೂಕಿನಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ ಹಾಗೂ ಪ.ಪಂ ಮುಖ್ಯಾಧಿಕಾರಿಗಳಿಗೆ ಕೊಲ್ಹಾರ ಕರವೇ ಘಟಕದ ಪದಾಧಿಕಾರಿಗಳಿಂದ ಕಳೆದ ಮೂರು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನೂ ಮೂರು ದಿನ ಕಾಲಾವಕಾಶವನ್ನು ನೀಡುತ್ತಿದ್ದೇವೆ, ಕನ್ನಡ ನಾಮ ಫಲಕಗಳನ್ನು ಹಾಕದೇ ಹೋದರೆ ಕರವೇಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರವೇ ತಾಲೂಕಾಧ್ಯಕ್ಷ ವಿಜಯಮಹಾಂತೇಶ ಗಿಡ್ಡಪ್ಪಗೋಳ ಮಾತನಾಡಿ, ಪಟ್ಟಣದಲ್ಲಿರುವ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ, ಮಾರುಕಟ್ಟೆ ಸ್ಥಳದಲ್ಲಿ ಎಲ್ಲರೂ ಕನ್ನಡ ನಾಮ ಫಲಕಗಳನ್ನು ಅಳವಡಿಸಿಕೊಳ್ಳಬೇಕೆಂದು ವ್ಯಾಪಾರಸ್ಥರಿಗೆ ತಿಳಿಸಿದರು.

ಈ ವೇಳೆ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ಸಂತೋಷ ಹಡ್ರೋಳ್ಳಿ, ಬಸವರಾಜ ಗಡ್ಡಿಪೂಜಾರಿ, ಸುನೀಲ ಬರಗಿ, ಯಲ್ಲಪ್ಪ ಹಡ್ರೋಳ್ಳಿ, ಭಿಮನಗೌಡ ಬಿರಾದಾರ, ಮುತ್ತು ಹಿಪ್ಪರಗಿ, ಮಲ್ಲು ಉಗ್ರಾಣ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article