ಮನೆ ಭಾಷೆಗೆ ನೀಡುವಷ್ಟೇ ಮಹತ್ವವನ್ನು ಕನ್ನಡಕ್ಕೂ ನೀಡಬೇಕು. ಹಲವು ವರ್ಷಗಳಿಂದ ಜನಜಾಗೃತಿಯ ಕೊರತೆಯಿಂದ ತಾಲೂಕಿನ ಮೂಲೆ-ಮೂಲೆಯಲ್ಲೂ ಕನ್ನಡ ಭಾಷೆ ಬೆಳವಣಿಗೆಯಾಗದೇ ಉಳಿದುಕೊಂಡಿದೆ.
ಜೋಯಿಡಾ:
ಮನೆ ಭಾಷೆಗೆ ನೀಡುವಷ್ಟೇ ಮಹತ್ವವನ್ನು ಕನ್ನಡಕ್ಕೂ ನೀಡಬೇಕು. ಹಲವು ವರ್ಷಗಳಿಂದ ಜನಜಾಗೃತಿಯ ಕೊರತೆಯಿಂದ ತಾಲೂಕಿನ ಮೂಲೆ-ಮೂಲೆಯಲ್ಲೂ ಕನ್ನಡ ಭಾಷೆ ಬೆಳವಣಿಗೆಯಾಗದೇ ಉಳಿದುಕೊಂಡಿದೆ ಎಂದು ತಿಂಬೋಲಿ ಗ್ರಾಮದ ಮುಖಂಡ ಸಖಾರಾಮ ಫೊಂಡೆ ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗುಂದ ಪ್ರೇರಣಾ ಸಂಸ್ಥೆ ಸಹಯೋಗದಲ್ಲಿ ಜಗಲಬೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಂಬೋಲಿ-ತೆರೆಗಾಳಿಯಲ್ಲಿ ಕನ್ನಡ ಕಲಿಕಾ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಪ್ರಾಧಿಕಾರ ಕನ್ನಡ ಕಲಿಕಾ ಶಿಬಿರದ ಮೂಲಕ ಪ್ರತಿ ಗ್ರಾಮಗಳಲ್ಲಿ ಕನ್ನಡ ಭಾಷೆಯ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಸುಕನ್ಯಾ ದೇಸಾಯಿ ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿ ಹಾಗೂ ಕಲಿಕೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಸಂಘ-ಸಂಸ್ಥೆಗಳು ಆಯೋಜಿಸಿರುವ ಶಿಬಿರದ ಸಹಾಯ ಪಡೆದು ಭಾಷಾಜ್ಞಾನ ಹಾಗೂ ಇತರ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ತಾಲೂಕಿನ ಜಗಲಬೇಟ, ರಾಮನಗರ ಪ್ರದೇಶಗಳಲ್ಲಿ ಮರಾಠಿ, ಕೊಂಕಣಿ ಭಾಷೆ ಪ್ರಭಾವಿತವಾಗಿದೆ. ಆದರೆ ಕಳೆದ ಹತ್ತು ವರ್ಷಗಳಿಂದ ಇಲ್ಲಿ ಕನ್ನಡ ಭಾಷೆಯ ಅಭಿರುಚಿ ಹೆಚ್ಚುತ್ತಿದೆ. ಈ ಭಾಗದಲ್ಲಿ ಕನ್ನಡ ಕಲಿಕಾ ಶಿಬಿರ ಆಯೋಜಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಶಿಬಿರದಲ್ಲಿ ವ್ಯಾಪಾರ, ಸರ್ಕಾರಿ ಕಚೇರಿಗಳು, ಬ್ಯಾಂಕ್ ಮತ್ತು ಇತರ ಸ್ಥಳಗಳಲ್ಲಿ ವ್ಯವಹರಿಸಲು, ಪತ್ರ ಓದಲು ಮತ್ತು ಸಹಿ ಮಾಡಲು ಸಹ ಕನ್ನಡ ಭಾಷೆ ಕಲಿಸಲಾಯಿತು. ಡಿಸೆಂಬರ್ ತಿಂಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ ಹಾನಗಲ್ ಜೋಯಿಡಾ ತಾಲೂಕಿಗೆ ಭೇಟಿ ನೀಡಿದ ವೇಳೆ ಜಗಲಬೇಟ ಪಂಚಾಯಿತಿ ವ್ಯಾಪ್ತಿಯ ತೆರೆಗಾಳಿ ಗ್ರಾಮದಲ್ಲಿ ಕನ್ನಡ ಕಲಿಕಾ ಶಿಬಿರ ಪ್ರಾರಂಭವಾಗಿತ್ತು. ಸಾವಿತ್ರಿ ಪೊಂಡೆ, ಗ್ರಾಪಂ ಸದಸ್ಯ ಸೋನು ಫೊಂಡೆ, ಸಖಾರಾಮ ಫೊಂಡೆ, ಬಮ್ಮು ಶೆಳಕೆ, ಭಾಗು ಬಾಜಾರಿ, ಬಾಬು ಶೆಳಕೆ, ಬಾಬು ಫೊಂಡೆ, ಗಂಗೂಬಾಯಿ ಶೆಳಕೆ, ಅಂಬಾಬಾಯಿ ಫೊಂಡೆ, ವಿಠ್ಠು ಬಾಜಾರಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.