ಕಾರಟಗಿ: ದೇಶದಲ್ಲಿಯೇ ಅತೀ ಹೆಚ್ಚು ಜ್ಞಾನಪೀಠ ದೊರಕಿದ್ದು ಕನ್ನಡ ನಾಡಿಗೆ. ನಾವೆಲ್ಲ ಹೆಚ್ಚು ಕನ್ನಡ ಮಾತನಾಡುವ ಮೂಲಕ ನಮ್ಮ ಭಾಷೆಯನ್ನೇ ಹೆಚ್ಚು ಬಳಕೆ ಮಾಡಬೇಕಾಗಿದೆ ಜತೆಗೆ ಕನ್ನಡ ನೆಲ, ಜಲ ಮತ್ತು ಸಂಸ್ಕೃತಿ ಕಾಪಾಡಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಹೇಳಿದರು.
ನಮ್ಮ ನೆಲ, ಜಲ ಬಳಕೆ ಮಾಡಿಕೊಂಡು ನಮ್ಮ ನಡುವೆ ಜೀವಿಸುವ, ಉದ್ಯೋಗ ಮಾಡುವವರು ಕನ್ನಡ ಭಾಷೆ ಮಾತನಾಡಿ ವ್ಯವಹರಿಸುವಂತೆ ನಾವೆಲ್ಲ ಆಡಳಿತದಲ್ಲಿಯೇ ಕನ್ನಡ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಆಗ ಮಾತ್ರ ಕನ್ನಡ ನಾಡಿನಲ್ಲಿ ಇದ್ದುಕೊಂಡವರು ಕನ್ನಡ ಭಾಷೆಯ ಹಿರಿಮೆ ತಿಳಿದು ಸರಿದಾರಿಗೆ ಬರುತ್ತಾರೆ. ನಮಗೆಲ್ಲ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದರು.
ಕನ್ನಡ ರಾಜ್ಯೋತ್ಸವ ಎಂಬುದು ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ, ನಮ್ಮ ರಾಜ್ಯದ ಸುವರ್ಣ ಪರಂಪರೆ ನೆನೆಯುತ್ತಾ.ರಾಜ್ಯದ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರಿಸುವ ಮೂಲಕ ಕನ್ನಡಿಗರಾದ ನಾವೆಲ್ಲ ಕನ್ನಡ ರಾಜ್ಯೋತ್ಸವ ಹಬ್ಬದಂತೆ ಆಚರಣೆ ಮಾಡೋಣ ಎಂದರು.ಇದಕ್ಕೂ ಮುಂಚೆ ಪುರಸಭೆ ಸದಸ್ಯರು, ಕಚೇರಿಯ ಅಧಿಕಾರಿಗಳ, ಸಿಬ್ಬಂದಿ, ಕನ್ನಡ ಪರ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು, ನಾಡದೇವಿ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿದರು.
ವಿವಿಧೆಡೆ: ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳು ಸೇರಿದಂತೆ ಶಾಲಾ ಕಾಲೇಜ್ಗಳಲ್ಲಿ ೭೦ನೇ ರಾಜ್ಯೋತ್ಸವ ಆಚರಿಸಲಾಯಿತು.
ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಔಪಚಾರಿಕವಾಗಿ ತಹಸೀಲ್ದಾರ್ ಕುಮಾರಸ್ವಾಮಿ ಮಾತನಾಡಿದರು.
ಪೊಲೀಸ್ ಠಾಣೆ, ಅಗ್ನಿಶಾಮಕ ಕಚೇರಿ, ಹಳೆ ತಹಸೀಲ್ದಾರ ಕಚೇರಿ ಸೇರಿದಂತೆ ಪಟ್ಟಣದ ಸರ್ಕಾರಿ ಕಚೇರಿ, ಶಾಲಾ ಕಾಲೇಜ್ ಖಾಸಗಿ ವಿದ್ಯಾ ಸಂಸ್ಥೆ, ಬಿಜೆಪಿ ಕಚೇರಿಯಲ್ಲಿ ಶನಿವಾರ ೭೦ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ವಂದಿಸಿದರು.
ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ಮೌನೇಶ ದಡೇಸ್ಗೂರು, ತಿಪ್ಪಣ್ಣ ನಾಯಕ, ದೇವರಾಜ ನಾಯಕ, ಮಂಜುನಾಥ ಮಸ್ಕಿ,ವೀರೇಶ ದಿವಟರ್, ದೇವರಾಜ, ಆಂಜನೇಯ್ಯ ಬೂದುಗುಂಪಾ, ಹುಲಗಪ್ಪ ದಿಡ್ಡಿಮನಿ, ವಿಜಯ ದೇಸಾಯಿಕ್ಯಾಂಪ್ ಇದ್ದರು.