ಯುವ ಜನಾಂಗ ನಮ್ಮ ನಾಡಿನ ಅಮೂಲ್ಯ ಆಸ್ತಿ. ಅವರಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಗೌರವ ಬೆಳೆಯುವ ಹಾಗೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗನ ಕರ್ತವ್ಯ ಎಂದು ಪ್ರೊ. ಬಿ. ರಾಘವ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಯುವ ಜನಾಂಗ ನಮ್ಮ ನಾಡಿನ ಅಮೂಲ್ಯ ಆಸ್ತಿ. ಅವರಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಗೌರವ ಬೆಳೆಯುವ ಹಾಗೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗನ ಕರ್ತವ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ಬಿ.ರಾಘವ ಹೇಳಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ನಾಡು ಎನ್ನುವ ಭಾವನೆ ಉಂಟು ಮಾಡಿದ ಮಹಾನ್ ವ್ಯಕ್ತಿಗಳಾದ ಕರ್ನಾಟಕ ಗತ ವೈಭವ ಕೃತಿಕಾರರಾದ ಆಲೂರು ವೆಂಕಟರಾಯರು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದ ಹುಯಿಳಗೋಳ್ ನಾರಾಯಣರಾಯರು, ಬಿ.ಎಂ.ಶ್ರೀ, ಗೋವಿಂದ ಪೈ ಮುಂತಾದವರನ್ನು ಸ್ಮರಿಸುತ್ತ ಭಾಷಾವಾರು ರಾಜ್ಯಗಳ ವಿಂಗಡಣೆ, 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಯಿತು. ಕನ್ನಡ ಭಾಷೆಯ ಹಿರಿಮೆಯನ್ನು ಕುರಿತು 8 ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ. ಇತ್ತೀಚಿಗೆ ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟ ಬಾನು ಮುಸ್ತಾಕ್ ಅವರನ್ನು ಸ್ಮರಿಸಿದರು. ಕನ್ನಡದ ಕುರಿತು ಸಮ್ಮೇಳನ, ಕಮ್ಮಟ, ವಿಚಾರ ಸಂಕಿರಣಗಳ ಮೂಲಕ ಕನ್ನಡ ಭಾಷೆಯ ಕುರಿತು ಜಾಗೃತಿಯನ್ನು ಮೂಡಿಸೋಣ ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಬೆಂಗಳೂರಿನ ಜೈನ್ ಡೀಮ್ಡ್ ಟು ಬಿ ವಿಶ್ವ ವಿದ್ಯಾಲಯದ ಡಾ. ಕೆ.ಬಿ.ಶೋಭಾ ಅವರು ಕನ್ನಡ ಭಾಷೆಯ ಪ್ರಾಚೀನತೆ ಕುರಿತು ಮಾತನಾಡಿ, ಶ್ರೀವಿಜಯನ ಕವಿರಾಜಮಾರ್ಗದ "ಕಾವೇರಿಯಿಂದಾಮ ಗೋದಾವರಿವರಮಿರ್ದ ನಾಡದ " ಎಂದು ಕನ್ನಡ ನಾಡಿನ ವಿಸ್ತಾರತೆಯ ಬಗ್ಗೆ ಮತ್ತು ಕರ್ನಾಟಕವನ್ನು ಕರುನಾಡು ಎಂದು ಕಪ್ಪು ಮಣ್ಣಿನ ನಾಡು ಎಂದು ಕರೆಯಲಾಗುತ್ತಿತ್ತು ಎಂದರು. ಕನ್ನಡ ಭಾಷೆಯ ಜ್ಞಾನ ಬಹಳ ಮುಖ್ಯ, ಅಜ್ಞಾನದಿಂದ ಹೊರಬರಬೇಕು ಹೇಳಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕನ್ನಡವನ್ನು ಉಳಿಸಿ, ಬೆಳೆಸುವ ಜವಾಬ್ಧಾರಿ ಎಲ್ಲರ ಮೇಲಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ದಮಯಂತಿ ಪೊನ್ನಪ್ಪ ಮಾತನಾಡಿ, ಕನ್ನಡ ಭಾಷೆ ಚಂದದ ಭಾಷೆ. ಹೆಚ್ಚು ಹೆಚ್ಚು ಬಳಸಿ, ಬೆಳೆಸಬೇಕು ಎಂದು ಕರೆ ನೀಡಿದರು. ಉಪನ್ಯಾಸಕಾರ ಬಿ.ಹೆಚ್.ತಳವಾರ್ ಮಾತನಾಡಿ, ಕರ್ನಾಟಕ ಏಕೀಕರಣದ ಇತಿಹಾಸವನ್ನು ಮತ್ತು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಈ.ತಿಪ್ಪೇಸ್ವಾಮಿ, ಡಾ. ರಾಜೇಂದ್ರ, ಡಾ. ಶೈಲಶ್ರೀ, ಡಾ.ರೇಣುಶ್ರೀ, ಪ್ರದೀಪ್ ಭಂಡಾರಿ, ಖುರ್ಶಿದ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಪ್ನ, ಚೋಂದಮ್ಮ ಮತ್ತು ಲಿಖಿತ ಪ್ರಾರ್ಥನೆ ಮತ್ತು ಕನ್ನಡ ಗೀತೆಗಳನ್ನು ಹಾಡಿದರು. ಪ್ರೊ. ಶ್ರೀಧರ್ ಆರ್ ಹೆಗ್ಡೆ ಸ್ವಾಗತಿಸಿದರು, ಡಾ. ಮಹಾಲಕ್ಷ್ಮೀ ಅವರು ನಿರೂಪಣೆ ಮಾಡಿದರು. ಪ್ರೊ. ಕೃಷ್ಣ ಎಂ.ಪಿ. ವಂದಿಸಿದರು. ರಾಷ್ಟ್ರಗೀತೆ ಮತ್ತು ನಾಡಗೀತೆ ಯನ್ನು ಹಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಜೊತೆಗೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾಲೇಜಿಗೆ ಅವಶ್ಯ ಸಲಕರಣೆಗಳನ್ನು ನೀಡಿದ ದಾನಿಗಳಾದ ದಮಯಂತಿ ಪೊನ್ನಪ್ಪ ಅವರನ್ನು ಇದೇ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.